ಕಾರವಾರ: ಕುಟುಂಬ ಸಮೇತ ಊರಿಗೆ, ಪ್ರವಾಸಕ್ಕೆ ಅಥವಾ ಯಾವುದೇ ಸಮಾರಂಭಗಳಿಗೆ ತೆರಳುವಾಗ “ಮನೆಗೆ ಬೀಗವನ್ನೇನೋ ಹಾಕಿ ಆಗಿದೆ. ಆದರೆ, ಕಳ್ಳತನ ಆದರೆ?” ಎಂಬ ಆತಂಕ ಬಹುತೇಕರನ್ನು ಕಾಡುವುದು ಸಾಮಾನ್ಯ.
ಈ ಚಿಂತೆಗೆ ತೆರೆ ಎಳೆಯುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಭರವಸೆಯ ಹೆಜ್ಜೆಯಾಗಿ “ರಕ್ಷಾ ಕಾರ್ಯಕ್ರಮ” (Locked House Beat System) ಎಂಬ ನೂತನ ಸೇವೆಯನ್ನು ಆರಂಭಿಸಿದೆ.
ಈ ಯೋಜನೆಯ ಮೂಲಕ ಜನರು ಮನೆಯಿಂದ ದೂರ ಇರುವ ಅವಧಿಯಲ್ಲಿ ತಮ್ಮ ಮನೆಯ ಭದ್ರತೆಯನ್ನು ಪೊಲೀಸರಿಗೆ ಒಪ್ಪಿಸಿ ನಿಶ್ಚಿಂತರಾಗಿ ಪ್ರಯಾಣಿಸಬಹುದು. ಕೇವಲ ಒಂದು ವಾಟ್ಸಾಪ್ ಸಂದೇಶದ ಮೂಲಕ ಈ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಸುರಕ್ಷತೆಗಾಗಿ ಪೊಲೀಸರು ನೇರವಾಗಿ ಗಮನ ಹರಿಸುವ ವ್ಯವಸ್ಥೆ ಇದಾಗಿದೆ.
ಈ ಸೇವೆಯನ್ನು ಪಡೆಯಲು, ಮನೆ ಬಿಟ್ಟು ಹೊರಡುವ ಮೊದಲು ಉತ್ತರ ಕನ್ನಡ ಜಿಲ್ಲಾ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆ 8277988303ಕ್ಕೆ ತಮ್ಮ ಪ್ರಯಾಣದ ದಿನಾಂಕ ಮತ್ತು ಹಿಂದಿರುಗುವ ದಿನಾಂಕ, ಮನೆಯ ಸಂಪೂರ್ಣ ವಿಳಾಸ ಹಾಗೂ ಲೊಕೇಶನ್, ಜೊತೆಗೆ ಮನೆಯ ಮುಂಭಾಗದಲ್ಲಿ ತೆಗೆದ ಸೆಲ್ಫಿ ಫೋಟೋವನ್ನು ಕಳುಹಿಸಬೇಕು.
ಈ ಮಾಹಿತಿಯನ್ನು ಪಡೆದ ನಂತರ, ಸ್ಥಳೀಯ ಪೊಲೀಸರು ತಮ್ಮ ದೈನಂದಿನ ಗಸ್ತಿನ ಸಮಯದಲ್ಲಿ ಆ ಮನೆಯ ಸುತ್ತಮುತ್ತ ನಿಗಾ ಇಟ್ಟು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆಯದಂತೆ ಕಣ್ಣಿಟ್ಟಿರುತ್ತಾರೆ.
ಈ ಹಿನ್ನೆಲೆಯಲ್ಲಿ “ನಿಶ್ಚಿಂತರಾಗಿರಿ, ನಿಮ್ಮ ಮನೆಯ ಭದ್ರತೆಯನ್ನು ನಾವು ನೋಡಿಕೊಳ್ಳುತ್ತೇವೆ” ಎಂಬ ಭರವಸೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ನೀಡಿದ್ದಾರೆ.
ಈ ರೀತಿಯ ಜನಪರ ಯೋಜನೆ ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಮನೆ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮತ್ತೇಕೆ ಯೋಚನೆ? ದೂರದೂರಿಗೆ ನಿಶ್ಚಿಂತೆಯಿಂದ ಪ್ರಯಾಣ ಮಾಡಿ, ಮನೆಯ ಕಾಳಜಿಯನ್ನು ಪೊಲೀಸ್ ಇಲಾಖೆಗೆ ಬಿಡಿ!