ಯಲ್ಲಾಪುರ: ವಿಶ್ವಕರ್ಮ ಸಮುದಾಯವು ಸಮಾಜದಲ್ಲಿ ಅತ್ಯಂತ ಚಿಕ್ಕ ಸಮುದಾಯವಾದರೂ ಸಹ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪುಟ್ಟ ಸಮುದಾಯವಾದರೂ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಆಯೋಜಿಸಿದ್ದೀರಿ. ಸಮಾಜ ಸಂಘಟನೆ ಇನ್ನಷ್ಟು ಬಲಗೊಳ್ಳಲಿ. ನಾವು ನಿಮ್ಮ ನೆರವಿಗೆ ಸದಾ ಇದ್ದೇವೆ. ರಚನಾತ್ಮಕ ಕಾರ್ಯಗಳಲ್ಲಿ ತೊಡಗೊಳ್ಳಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶ್ರೀ ವಿಶ್ವಕರ್ಮ ಪ್ರತಿಷ್ಠಾನ ಯಲ್ಲಾಪುರ ಇವರ ಆಶ್ರಯದಲ್ಲಿ ಶ್ರೀ ಕಾಳಿಕಾಂಬಾ ದೇವಾಲಯ ಕಾಳಮ್ಮನಗರದಲ್ಲಿ ನಡೆದ ವಿಶ್ವಕರ್ಮ ಸಮುದಾಯದ ವಾರ್ಷಿಕೋತ್ಸವದ ಸಾಯಂಕಾಲದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಹೆಬ್ಬಾರ್ ಅವರನ್ನು ಸಮುದಾಯದ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮ ಪ್ರತಿಷ್ಠಾನ ಯಲ್ಲಾಪುರ ಘಟಕದ ಅಧ್ಯಕ್ಷ ವೇದವ್ಯಾಸ ಆರ್ ವಹಿಸಿದ್ದರು. ಕಾರ್ಯದರ್ಶಿ ಮಾರುತಿ ಆಚಾರಿ ಅರಬೈಲ್, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿದಾರ ಪ್ರಶಾಂತ ಆಚಾರ್ಯ, ಸಮುದಾಯದ ಹಿರಿಯರಾದ ಜ್ಞಾನೇಶ್ವರ ಆಚಾರಿ, ಶಿಕ್ಷಕರಾದ ಡಾ. ನವೀನಕುಮಾರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಬರ್ಕಿ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮದೇವಿ ದೇವಸ್ಥಾನ ಯಲ್ಲಾಪುರದ ಪ್ರಧಾನ ಅರ್ಚಕ ಕೃಷ್ಣ ಆಚಾರಿ ಹಾಗೂ ಸಮುದಾಯದ ಹಿರಿಯ ಸಾಹಿತಿ ಕೃಷ್ಣ ಆಚಾರಿ ಬಾರೆ ಅವರನ್ನು ಸನ್ಮಾನಿಸಲಾಯಿತು.
ಚಂದ್ರಶೇಖರ್ ಆಚಾರಿ ಪ್ರಾರ್ಥನೆ ನೆರವೇರಿಸಿದರು. ಮಾರುತಿ ಆಚಾರಿ ಸ್ವಾಗತಿಸಿದರು. ಪವಿತ್ರಾ ಆಚಾರಿ ಹಾಗೂ ಹೇಮಾವತಿ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಗಣಹವನ, ಸಾಮೂಹಿಕ ಸತ್ಯನಾರಾಯಣ ಕಥೆ, ಭಗವಾನ್ ವಿಶ್ವಕರ್ಮ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಮುದಾಯದ ಬಾಂಧವರಿಗೆ ರಂಗೋಲಿ ಸ್ಪರ್ಧೆ, ಆರತಿ ಬಟ್ಟಲು ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ಪ್ರತ್ಯೇಕವಾಗಿ ಮೋಜಿನ ಆಟಗಳ ಸ್ಪರ್ಧೆಗಳು ಮುದ ತಂದವು.
ತದನಂತರ ಸಮುದಾಯದ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತ್ರಿಶಬ್ದಿ ಮೆಲೋಡೀಸ್ನ ಹೆಸರಾಂತ ಗಾಯಕ ಗಣೇಶ್ ಆಚಾರಿ ಗುಳ್ಳಾಪುರ ಹಾಗೂ ಸಂತೋಷ್ ಆಚಾರಿ ಶಿರಸಿ ಇವರಿಂದ ರಸಮಂಜರಿ ಕಾರ್ಯಕ್ರಮವೂ ನೆರವೇರಿತು.
ಕಾರ್ಮಿಕ ಕಾರ್ಡ್ ಅರ್ಜಿ ವಿತರಣೆ, ಉಚಿತ ಬಿಪಿ ಹಾಗೂ ಶುಗರ್ ಪರೀಕ್ಷೆಗಳನ್ನು ಅಗತ್ಯವಿರುವವರಿಗೆ ಸಂಘಟನೆಯ ವತಿಯಿಂದ ಮಾಡಲಾಯಿತು. ವಿಶ್ವಕರ್ಮ ಸಮುದಾಯದ ಎಲ್ಲ ಬಾಂಧವರು ಸೇರಿ ಹಬ್ಬದಂತೆ ವಾರ್ಷಿಕೋತ್ಸವವನ್ನು ಆಚರಿಸಿ ಗಮನ ಸೆಳೆದರು.