ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನಕ್ಕೆ ಅಭಿನಂದನೆ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ರೈತರ ಬಹು ದಿನಗಳ ನಿರೀಕ್ಷೆಯಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮೆ ಹಣ ಇದೀಗ ಜಮೆಯಾಗುತ್ತಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದ ಫಲವಾಗಿ ಈ ಬಾಕಿ ಮೊತ್ತ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿರುವುದು ಸಂತಸದ ಸಂಗತಿ.
ಉತ್ತರ ಕನ್ನಡ ಜಿಲ್ಲೆಯ, ವಿಶೇಷವಾಗಿ ಅಂಕೋಲಾ ತಾಲೂಕಿನ ರೈತರ ಪರವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆಗಳು ಎಂದು ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಭಟ್ಟ ಕಲ್ಲೇಶ್ವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2025ರ ಅಕ್ಟೋಬರ್ ತಿಂಗಳಲ್ಲೇ ಜಮೆಯಾಗಬೇಕಿದ್ದ ಈ ವಿಮಾ ಹಣ, ಮಳೆಮಾಪನ ಕೇಂದ್ರಗಳ ದೋಷಪೂರಿತ ಕಾರ್ಯಾಚರಣೆ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿಳಂಬಗೊಂಡಿತ್ತು.
ಅಗತ್ಯ ಮಳೆಮಾಪನ ಯಂತ್ರಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ವಿಮಾ ಪರಿಹಾರ ವಿತರಣೆಯಲ್ಲಿ ಗೊಂದಲ ಉಂಟಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಕಾಗೇರಿ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ವಿಮಾ ಹಣ ಬಿಡುಗಡೆಗೆ ಒತ್ತಾಯಿಸಿದ್ದರು.
ಕೇಂದ್ರದಿಂದ ಆದೇಶ ಹೊರಬಂದಿದ್ದರೂ ವಿಮಾ ಕಂಪನಿಗಳು ವಿಳಂಬ ಮಾಡುತ್ತಿದ್ದ ಹಿನ್ನೆಲೆಯಲ್ಲಿ, ಅವರ ನಿರಂತರ ಹೋರಾಟದಿಂದ ಇದೀಗ ಸ್ಪಷ್ಟ ನಿರ್ದೇಶನಗಳು ಜಾರಿಯಾಗಿದ್ದು, ಬಾಕಿ ಹಣ ಬಿಡುಗಡೆಗೊಂಡಿದೆ.
ಈ ಪ್ರಕ್ರಿಯೆಯಲ್ಲಿ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾನ್ ಅವರ ಸಹಕಾರವೂ ಮಹತ್ವದ್ದಾಗಿದೆ. ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಕಾರದಿಂದ ರೈತರಿಗೆ ನ್ಯಾಯ ಒದಗಿಸಲಾಗಿದೆ.
ಕಳೆದ ವರ್ಷ ಅಧಿಕ ಮಳೆಯ ಪರಿಣಾಮವಾಗಿ ಬೆಳೆಗಳಲ್ಲಿ ಕೊಳೆರೋಗ ಹಾಗೂ ಎಲೆ ಚುಕ್ಕೆ ರೋಗಗಳು ವ್ಯಾಪಕವಾಗಿ ಹರಡಿ, ರೈತರು ಭಾರೀ ನಷ್ಟ ಅನುಭವಿಸಿದ್ದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಈಗ ಜಮೆಯಾಗುತ್ತಿರುವ ವಿಮಾ ಹಣ ರೈತರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆಮ್ಮದಿ ತರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.