ದಾಂಡೇಲಿ: ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಕಂಪನಿಗೆ ಸೇರಿದ ಜಾಗವನ್ನು ಅತಿಕ್ರಮಿಸಲು ಯತ್ನಿಸಿದ ಆರೋಪದ ಮೇಲೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರಾದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ನ ಹಿರಿಯ ವ್ಯವಸ್ಥಾಪಕ ರಾಜೇಶ್ ಗೋವಿಂದಲಾಲ್ ತಿವಾರಿ ಅವರು ನೀಡಿದ ದೂರಿನ ಮೇರೆಗೆ, ದಾಂಡೇಲಿ ನಿವಾಸಿ ಭೀಮಣ್ಣ ಕಾಮಟೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಕಂಪನಿಯು ಕಂಪನಿಗಳ ಕಾಯ್ದೆ-1956ರಡಿ ನೋಂದಾಯಿತ ಸಂಸ್ಥೆಯಾಗಿದ್ದು, ಎಸ್ಆರ್ಟಿ, ಟಿಆರ್ಟಿ ಪ್ರದೇಶಗಳು, ಸುದರ್ಶನ ನಗರ ಹಾಗೂ ದಾಂಡೇಲಿಯಲ್ಲಿರುವ ಹಲವು ಜಾಗಗಳನ್ನು ಕಾನೂನುಬದ್ಧ ಗುತ್ತಿಗೆ ಒಪ್ಪಂದದಡಿ ಹೊಂದಿದೆ. ಈ ಪ್ರದೇಶಗಳಲ್ಲಿ ಕಂಪನಿ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಿದ್ದು, ಸಂಬಂಧಿತ ಆಸ್ತಿಗಳಿಗೆ ನಗರಸಭೆಗೆ ನಿಯಮಿತವಾಗಿ ತೆರಿಗೆಯನ್ನೂ ಪಾವತಿಸುತ್ತಿದೆ.
ಹೀಗಿರುವಾಗ, ಜುಲೈ 27ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಸುದರ್ಶನ ನಗರದ ಆರ್.ಸಿ. ಬ್ರಿಡ್ಜ್ ಸಮೀಪದ ಕಂಪನಿಯ ಆವರಣಕ್ಕೆ ಭೀಮಣ್ಣ ಕಾಮಟೆ ಅನಧಿಕೃತವಾಗಿ ಪ್ರವೇಶಿಸಿ, ಕಂಪನಿಗೆ ಸೇರಿದ ಖಾಲಿ ಜಾಗದಲ್ಲಿ ಸಿಮೆಂಟ್ ಕಂಬಗಳನ್ನು ನಿರ್ಮಿಸುವ ಮೂಲಕ ಜಮೀನನ್ನು ಅತಿಕ್ರಮಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಕಂಪನಿಯ ಶಾಂತಿಯುತ ಸ್ವಾಧೀನ ಹಾಗೂ ಬಳಕೆಗೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.