ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಜನರು ವರ್ಷಗಳಿಂದ ಹಸಿರಿನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪಶ್ಚಿಮ ಘಟ್ಟ, ನದಿಗಳು ಹಾಗೂ ಅರಣ್ಯ ಸಂಪತ್ತನ್ನು ಕಾಪಾಡುವಲ್ಲಿ ಇಲ್ಲಿನ ಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ”ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದ ʻಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನ ಕಾರ್ಯಾಗಾರʼದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಣ್ಯ ಸಂರಕ್ಷಣೆ ಎಂಬುದು ಕೇವಲ ಇಲಾಖೆಯ ಕೆಲಸವಲ್ಲ. ಈ ಭಾಗದ ಜನರು ತಲೆಮಾರುಗಳಿಂದ ಅರಣ್ಯವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡು ಕಾಪಾಡಿಕೊಂಡು ಬಂದಿದ್ದಾರೆ. ಅಭಿವೃದ್ಧಿ ಯೋಜನೆಗಳು ಬರಬಹುದು, ಆದರೆ ಪರಿಸರದ ಮೇಲೆ ಆಗುವ ದೌರ್ಜನ್ಯ ಕಡಿಮೆಯಾಗಬೇಕುʼ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ಮಾತನಾಡಿ, ಜೀವವೈವಿಧ್ಯ ಸಂರಕ್ಷಣೆ ಮುಂದಿನ ಪೀಳಿಗೆಗೆ ನೀಡಬೇಕಾದ ದೊಡ್ಡ ಹೊಣೆಗಾರಿಕೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಅಪರೂಪದ ಸಸ್ಯ, ಪ್ರಾಣಿ ಸಂಕುಲಗಳ ದಾಖಲಾತಿ ಮಾಡಬೇಕು. ಪಶ್ಚಿಮ ಘಟ್ಟಗಳ ಔಷಧೀಯ ಸಸ್ಯ ಸಂಪತ್ತನ್ನು ರಕ್ಷಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಮಾತನಾಡಿ, ಪಶ್ಚಿಮ ಘಟ್ಟಗಳು ವಿಶ್ವದ ಅಪರೂಪದ ಪರಿಸರ ಸಂಪತ್ತಿನ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಅರಣ್ಯ ಮತ್ತು ಜೀವವೈವಿಧ್ಯವನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನಂತ ಹೆಗಡೆ ಆಶೀಸರ, ಜೀವವೈವಿಧ್ಯ ಕುರಿತು ನಡೆಯುವ ಅಧ್ಯಯನ ಮತ್ತು ಸಂಶೋಧನೆಗಳ ಮಾಹಿತಿ ಸಾಮಾನ್ಯ ಜನರಿಗೂ ತಲುಪಬೇಕು. ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಹೆಚ್ಚಾಗಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿವಿಧ ವಿಜ್ಞಾನಿಗಳು ಜೀವವೈವಿಧ್ಯ, ಅರಣ್ಯ ಸಂಪತ್ತು ಹಾಗೂ ಪರಿಸರ ಸವಾಲುಗಳ ಕುರಿತು ಉಪನ್ಯಾಸ ನೀಡಿದರು. ಸ್ವ-ಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಅಜೀಜ್ ಶೇಖ್, ಪಾಂಡು ಕೆ.ಎಚ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಧನವಾಡಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಲತಾ ರಾಜೀವ್ ಹೆಗಡೆ ಪ್ರಾರ್ಥಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜೇಶ ಧನವಾಡಕರ್. ಸ್ವಾಗತಿಸಿದರು. ಜೀವವೈವಿಧ್ಯ ಸಮಿತಿ ಸದಸ್ಯ ಕೆ ಎಸ್ ಭಟ್ ಆನಗೋಡ , ಗಣಪತಿ ಭಾಗ್ವತ ನಿರ್ವಹಿಸಿದರು. ಜೀವವೈವಿಧ್ಯ ಸಮಿತಿಸದಸ್ಯ ನರಸಿಂಹ ಸಾತೊಡ್ಡಿ ವಂದಿಸಿದರು.