ಯಲ್ಲಾಪುರ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೊಲೆರೊ ವಾಹನ ಚಲಾಯಿಸಿದ ಪರಿಣಾಮ ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆ.30ರಂದು ಮಧ್ಯಾಹ್ನ ನಡೆದಿದೆ.
ಕಲ್ಲೇಶ್ವರ ಗ್ರಾಮದ ದೇವರಾಜ ಲಕ್ಷ್ಮಣ ಸಿದ್ದಿ ಅವರು ನೀಡಿದ ದೂರಿನ ಪ್ರಕಾರ, ಆ.30ರಂದು ಮಧ್ಯಾಹ್ನ 2.30ರ ಸುಮಾರಿಗೆ ಕೆಎ-31/9167 ನೋಂದಣಿ ಸಂಖ್ಯೆಯ ಬೊಲೆರೊ ವಾಹನವನ್ನು ಯಲ್ಲಾಪುರದ ನೂತನ ನಗರ ಜಡ್ಡಿಯ ನಿವಾಸಿ, ಕಾರ್ ಮೆಕ್ಯಾನಿಕ್ ಮಹಮ್ಮದ್ ಗಫೂರ್ ಶಂಶುದ್ದೀನ್ ಶೇಖ್ (27) ಎಂಬಾತ ಉಮ್ಮಚಗಿ ಕಡೆಯಿಂದ ಭರತನಹಳ್ಳಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ.
ರಸ್ತೆಯ ತೀರ ಬಲಭಾಗದಲ್ಲಿ ಚಲಿಸುತ್ತಿದ್ದ ಬೊಲೆರೊ, ಭರತನಹಳ್ಳಿ ಕಡೆಯಿಂದ ಉಮ್ಮಚಗಿ ಕಡೆಗೆ ಬರುತ್ತಿದ್ದ ಕೆಎ-30/ಕ್ಯೂ-0811 ನೋಂದಣಿ ಸಂಖ್ಯೆಯ ಬೈಕ್ಗೆ ತೋಟದ ಕಲ್ಲಳ್ಳಿ ಕ್ರಾಸ್ ಬಳಿ ಎದುರಿನಿಂದ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೈಕ್ನಲ್ಲಿ ಕೃಷ್ಣ ಬಾಬು ಸಿದ್ದಿ, ಸುನಂದಾ ಕೊಂ ಕೃಷ್ಣ ಸಿದ್ದಿ ಹಾಗೂ ಸಮನ್ವಿ ಅಣ್ಣಪ್ಪ ಸಿದ್ದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಲ್ಲಿ ಮೂವರಿಗೂ ಸಾಧಾರಣ ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಲ್ಲದೇ ಎರಡೂ ವಾಹನಗಳು ಜಖಂಗೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಅಪಘಾತದಲ್ಲಿ ಗಾಯಗೊಂಡಿದ್ದ ಎಲ್ಲ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಲ್ಲಾಪುರ ತಾಲೂಕಿನ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಕೃಷ್ಣ ತಂದೆ ಬಾಬು ಸಿದ್ದಿ (64) ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 8.55ರ ಸುಮಾರಿಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.