ಬೆಂಗಳೂರು: ನಗರದ ಮಂಜುನಾಥನಗರದಲ್ಲಿ 40 ವರ್ಷದ ವ್ಯಕ್ತಿಯೊಬ್ಬರನ್ನು ಲಿವ್-ಇನ್ ಸಂಗಾತಿ ಹಾಗೂ ಆಕೆಯ ಇಬ್ಬರು ಸಹಚರರು ಸೇರಿ ಕ್ರೂರವಾಗಿ ಹ*ತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಫೆಬ್ರವರಿ 18ರಂದು ನಡೆದ ಈ ಪ್ರಕರಣದಲ್ಲಿ ಮೃ*ತರನ್ನು ಮೋಹನ್ ರಾವ್ ಎಂದು ಪೊಲೀಸರು ಗುರುತಿಸಿದ್ದಾರೆ. ಪ್ರಕರಣ ಸಂಬಂಧ ನಟಿ ಊರ್ಮಿಳಾ ಅಲಿಯಾಸ್ ಬಿಂದು, ವಿನಯ್ ಹಾಗೂ ಧನುಷ್ ಗೌಡ ಎಂಬ ಮೂವರನ್ನು ಬಂಧಿಸಲಾಗಿದೆ. ಬಿಂದು ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವುದಾಗಿ ತಿಳಿದುಬಂದಿದೆ.
ಉತ್ತರ ಪಶ್ಚಿಮ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಅವರು ನೀಡಿದ ಮಾಹಿತಿಯಂತೆ, ಬಿಂದು ಲಾರಿ ಚಾಲಕನಾದ ವಿನಯ್ ಜೊತೆ ಆಪ್ತ ಸ್ನೇಹ ಬೆಳೆಸಿಕೊಂಡು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮೋಹನ್ ರಾವ್ ಅದಕ್ಕೆ ಅಡ್ಡಿಯಾಗುತ್ತಿದ್ದರು ಎನ್ನಲಾಗಿದೆ. “ಮದುವೆಗೆ ಅಡ್ಡಿಯಾಗಿದ್ದ ಮೋಹನ್ ರಾವ್ ಅವರನ್ನು ದಾರಿಗೆ ತರುವ ಉದ್ದೇಶದಿಂದ ಮೂವರು ಸೇರಿ ಈ ಕೃತ್ಯ ಎಸಗಿದ್ದಾರೆ” ಎಂದು ಡಿಸಿಪಿ ತಿಳಿಸಿದ್ದಾರೆ.
ತನಿಖೆಯಲ್ಲಿ ತಿಳಿದುಬಂದಂತೆ, ಮೋಹನ್ ರಾವ್ ತಮ್ಮ ಪತ್ನಿಯನ್ನು ಬಿಟ್ಟು ಬಿಂದು ಜೊತೆ ವಾಸಿಸುತ್ತಿದ್ದರು. ಬಿಂದು ಕೂಡ ವಿವಾಹಿತೆಯಾಗಿದ್ದು, ಪತಿಯಿಂದ ದೂರವಿದ್ದು ಮೋಹನ್ ರಾವ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ. ಮನೆ ಮಾಲೀಕರಿಗೆ ದಂಪತಿಗಳೆಂದು ಹೇಳಿ ಬಾಡಿಗೆಗೆ ಮನೆ ಪಡೆದಿದ್ದರೆಂಬ ಮಾಹಿತಿ ಹೊರಬಂದಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಮೋಹನ್ ರಾವ್ ಅವರಿಗೆ ಬಲವಂತವಾಗಿ ಔಷಧಿ ಸೇವಿಸಲು ಒತ್ತಾಯಿಸಿದ್ದು, ಅವರು ವಿರೋಧ ವ್ಯಕ್ತಪಡಿಸಿದಾಗ ಹಲವಾರು ಬಾರಿ ಚಾಕುವಿನಿಂದ ಇರಿದು ಕೊ*ಲೆಗೈದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ.