ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುತ್ತಮುತ್ತ ಮಂಗಳವಾರ ಭಾರೀ ಆಲಿಕಲ್ಲು ಮಳೆ ಸುರಿದ ಪರಿಣಾಮ, ಇಡೀ ಪ್ರದೇಶವೇ ಮಂಜುಗಡ್ಡೆಯ ಹೊದಿಕೆಯಲ್ಲಿ ಮುಳುಗಿದಂತೆ ಕಂಡುಬಂದಿತು.
ಕೆಲಕಾಲಕ್ಕೆ ಕಲಘಟಗಿ ಗ್ರಾಮ ಕಾಶ್ಮೀರದಂತೆಯೇ ಬದಲಾಗಿದ್ದ ದೃಶ್ಯ ಜನರಲ್ಲಿ ಆಶ್ಚರ್ಯ, ಆತಂಕವನ್ನೂ ಹುಟ್ಟಿಸಿತು.
ಮಳೆಯ ಜೊತೆ ಭಾರೀ ಪ್ರಮಾಣದಲ್ಲಿ ಸುರಿದ ಆಲಿಕಲ್ಲುಗಳು ರಸ್ತೆ, ಮನೆಗಳ ಮೇಲ್ಚಾವಣಿ ಹಾಗೂ ಗಿಡಗಂಟೆಗಳನ್ನು ಸಂಪೂರ್ಣವಾಗಿ ಆವರಿಸಿತ್ತು. ಎಲ್ಲೆಡೆ ಬಿಳಿ ಹಿಮದಂತಿರುವ ಆಲಿಕಲ್ಲುಗಳ ರಾಶಿ ಕಂಡುಬಂದಿದ್ದು, ಸ್ಥಳೀಯರು ಅವನ್ನು ತೆರವುಗೊಳಿಸಲು ಹರಸಾಹಸ ಪಟ್ಟರು.
ಆರಂಭದಲ್ಲಿ ಈ ಅಪರೂಪದ ದೃಶ್ಯವನ್ನು ಕಂಡ ಜನರು ಸಂಭ್ರಮ ವ್ಯಕ್ತಪಡಿಸಿದರೂ, ಆಲಿಕಲ್ಲುಗಳ ಪ್ರಮಾಣ ಹೆಚ್ಚಾದಂತೆ ಆತಂಕಕ್ಕೀಡಾದರು. ಹಿಮಾಲಯ ಪ್ರದೇಶದಲ್ಲಿ ಬೀಳುವ ಮಂಜಿನಂತೆಯೇ ಕಂಡ ಈ ದೃಶ್ಯ ಎಲ್ಲರ ಗಮನ ಸೆಳೆಯಿತು.
ಈ ಅಪರೂಪದ ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರವಾಡ ಜಿಲ್ಲೆಯ ಜನ ಕುತೂಹಲದಿಂದ ಅವನ್ನು ವೀಕ್ಷಿಸಿ ಬೆರಗಾಗುತ್ತಿದ್ದಾರೆ.