ಬೆಂಗಳೂರು: Karnataka High Court ಮಹತ್ವದ ತೀರ್ಪೊಂದರಲ್ಲಿ ಬಾಲ್ಯ ವಿವಾಹ ತಡೆಗೆ ಕಠಿಣ ಸಂದೇಶ ನೀಡಿದೆ. ಇನ್ನು ಮುಂದೆ ಬಾಲ್ಯ ವಿವಾಹ ನಡೆದರೆ ಪೋಷಕರ ವಿರುದ್ಧ ಮಾತ್ರವಲ್ಲ, ಮದುವೆ ನೆರವೇರಿಸುವ ಪುರೋಹಿತರು, ಕಾರ್ಯಕ್ರಮ ಆಯೋಜಕರು ಹಾಗೂ ಮಂಟಪದ ಮಾಲೀಕರ ವಿರುದ್ಧವೂ ದೂರು ದಾಖಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದೇವನಹಳ್ಳಿ ಕೋರ್ಟ್ನಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ M. Nagaprasanna ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. 16 ವರ್ಷದ ಬಾಲಕಿಯನ್ನು 27 ವರ್ಷದ ಯುವಕನಿಗೆ ಮದುವೆ ಮಾಡಿಸಿದ ಪ್ರಕರಣದಲ್ಲಿ ಪತಿ ಎನ್. ಮಂಜುನಾಥ ಸೇರಿ ಐವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
“ಬಾಲ್ಯ ವಿವಾಹವನ್ನು ನಡೆಸುವ, ಪ್ರೋತ್ಸಾಹಿಸುವ ಅಥವಾ ಸಹಕರಿಸುವ ಯಾರೇ ಆಗಿರಲಿ, ಅವರು ಸಮಾನ ಹೊಣೆಗಾರರು. ಪುರೋಹಿತರು, ಸಂಬಂಧಿಕರು, ಆಯೋಜಕರು ಎಲ್ಲರೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಶಿಕ್ಷೆಗೆ ಒಳಗಾಗುತ್ತಾರೆ. ಕಾನೂನು ಅಜ್ಞಾನವನ್ನು ಕ್ಷಮಿಸುವುದಿಲ್ಲ” ಎಂದು ನ್ಯಾಯಾಲಯ ಕಠಿಣವಾಗಿ ಹೇಳಿದೆ.