ಮೈಸೂರು : ಶಿಕ್ಷಣ ನಮ್ಮ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೈಸೂರಿನ ವಕೀಲರಾದ ಎಸ್.ವಿಶ್ವಾರಾಧ್ಯ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶಾರದಾ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಹೆಜ್ಜೆ ಗೆಜ್ಜೆ ನಿನಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ನಾವು ಸಮಾಜದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸಲು ಶಿಕ್ಷಣ ಪ್ರಮುಖ ಕಾರಣವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಕಲಿಕೆಗೆ ಹೆಚ್ಚು ಒತ್ತು ನೀಡಿ ಉತ್ತಮ ಅಂಕ ಗಳಿಸುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಭುವನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಹರೀಶ್ ಅವರು ಮಾತನಾಡಿ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂಬ ನಿರ್ಧಾರವನ್ನು ಸರ್ಕಾರ ಜಾರಿಗೆ ತಂದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದು ತಿಳಿಸಿ ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರ ಶ್ರಮದ ಫಲವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕರಾದ ಬಿ.ಪಿ ಚನ್ನೇಗೌಡ ಅವರು ಮಾತನಾಡಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ಜೊತೆಗೆ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಈ ವೇಳೆ ಗ್ರಾಮದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ನಾಲ್ವರು ವಿದ್ಯಾರ್ಥಿಗಳಿಗೆ ಇಂಜಿನಿಯರ್ ಬಿ.ಬಿ ಕೀರ್ತಿ ಕುಮಾರ್ ತಮ್ಮ ಕುಟುಂಬ ವತಿಯಿಂದ ನೀಡುವ ನಗದು ಪುರಸ್ಕಾರವನ್ನು ಶೈಲಜ ಭುಜಲಿಂಗೇಗೌಡ, ವಕೀಲರಾದ ಎಸ್.ವಿಶ್ವಾರಾಧ್ಯ ಅವರ ಪುತ್ರ ಗಿರೀಶ್ ನೆನಪಿಗಾಗಿ ಏಳನೇ ತರಗತಿ ಮೂವರು ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಭಾಗ್ಯ ವಿಶ್ವಾರಾದ್ಯ, ಆರಕ್ಷಕ ಸಿಬ್ಬಂದಿ ಬಿ.ಸಿ ರಾಘವೇಂದ್ರ ತಮ್ಮ ಕುಟುಂಬ ವತಿಯಿಂದ ನೀಡುವ ಆದರ್ಶ ವಿದ್ಯಾರ್ಥಿ ಪುರಸ್ಕಾರವನ್ನು ಪುಷ್ಪಲತಾ ಚಂದ್ರಶೇಖರ್, ಒಂದರಿಂದ ಏಳನೇ ತರಗತಿವರೆಗಿನ ಪ್ರತಿ ತರಗತಿಯ ಓರ್ವ ಕ್ರಿಯಾಶೀಲ ವಿದ್ಯಾರ್ಥಿಗೆ ಜ್ಯೋತಿಷಿಗಳಾದ ಭವಾನಿ ಷಣ್ಮುಖಾರಾಧ್ಯ ಕುಟುಂಬ ವತಿಯಿಂದ ನೀಡುವ ಪ್ರತಿಭಾ ಪುರಸ್ಕಾರವನ್ನು ರಮ್ಯಾ ಸತೀಶಾರಾಧ್ಯ ವಿದ್ಯಾರ್ಥಿಗಳಿಗೆ ವಿತರಿಸಿದರು.
ಅಂಗನವಾಡಿ ಪುಟಾಣಿಗಳ ನೃತ್ಯ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಮಾಜಿಕ ಸಂದೇಶ ನೀಡುವ ಕಿರು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು, ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್ ಕುಮಾರ್, ಉಪಾಧ್ಯಕ್ಷೆ ಶೋಭಾ ಹಾಗೂ ಸದಸ್ಯರು, ಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಕೃಷ್ಣ, ಅತಿಥಿ ಶಿಕ್ಷಕಿ ಆಶಾ, ಗೌರವ ಶಿಕ್ಷಕರಾದ ಕವನ, ರಕ್ಷಿತ್, ಅಂಗನವಾಡಿ ಕಾರ್ಯಕರ್ತೆ ರೂಪ ಸಹಾಯಕಿ ಶಾರದಾ, ಅಡುಗೆ ಸಿಬ್ಬಂದಿ ಪ್ರತಿಮಾ, ಸೌಮ್ಯ ಸೇರಿದಂತೆ ಗ್ರಾಮದ ಮುಖಂಡರು ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.