ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪೋಷಕರ ಆತಂಕಕ್ಕೆ ತೆರೆ ಎಳೆಯುವ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಘೋಷಿಸಿದಂತೆ, 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿದ್ದ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ಸಡಿಲಿಕೆಯನ್ನು ನೀಡಲಾಗಿದೆ.
ಈ ನಿರ್ಧಾರದಿಂದ ಸಾವಿರಾರು ಪೋಷಕರಿಗೆ ನೆಮ್ಮದಿ ಸಿಕ್ಕಿದ್ದು, ವಯೋಮಿತಿ ನಿಯಮದ ಕಾರಣ ಮಕ್ಕಳ ಪ್ರವೇಶಕ್ಕೆ ಆಗುತ್ತಿದ್ದ ತೊಂದರೆಗಳಿಗೆ ಪರಿಹಾರ ದೊರಕಿದೆ.
2026-27ನೇ ಶೈಕ್ಷಣಿಕ ಸಾಲಿನಿಂದಲೇ ಈ ನಿಯಮ ಜಾರಿಗೆ ಬರಲಿದ್ದು, 6 ವರ್ಷ ಪೂರೈಸಲು 60 ದಿನಗಳ ಕೊರತೆಯಿದ್ದರೂ ಮಕ್ಕಳಿಗೆ 1ನೇ ತರಗತಿಗೆ ಪ್ರವೇಶಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಮುಖ್ಯವಾಗಿ, ಈ ಸಡಿಲಿಕೆ ಕೇವಲ 1ನೇ ತರಗತಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳ ಪ್ರವೇಶಾತಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪೋಷಕರ ಅನುಕೂಲಕ್ಕಾಗಿ ಶಿಕ್ಷಣ ಇಲಾಖೆಯ Student Achievement Tracking System (SATS) ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಇದರಿಂದ ಪ್ರವೇಶಾತಿ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ.
ಪ್ರಸ್ತುತ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸ್ಪಷ್ಟ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ ಉಂಟಾಗುತ್ತಿರುವ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಹೊಸ ನಿಯಮಾವಳಿ ಹಾಗೂ ಕಾನೂನನ್ನು ರೂಪಿಸಿ ವಿಧಾನಸಭೆಯಲ್ಲಿ ಮಂಡಿಸುವ ಯೋಜನೆಯೂ ಇದೆ.
“ಮಕ್ಕಳ ದಾಖಲಾತಿ ವಿಚಾರದಲ್ಲಿ ಪೋಷಕರು ಶಾಲೆಯಿಂದ ಶಾಲೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ತಪ್ಪಿಸಲು 60 ದಿನಗಳ ಸಡಿಲಿಕೆಯನ್ನು ನೀಡಲಾಗಿದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ,” ಎಂದು ಸಚಿವರು ತಿಳಿಸಿದ್ದಾರೆ.