ಹೊಸನಗರ, ಏ.11: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದ ಶ್ರೀ ಶಂಭುಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಸಾಗುತ್ತಿದೆ.
ಏಪ್ರಿಲ್ 8ರಿಂದ ಆರಂಭಗೊಂಡ ಈ ಜಾತ್ರೆ ಏಪ್ರಿಲ್ 13ರವರೆಗೆ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಕೊಡಚಾದ್ರಿ ಪರ್ವತದ ತಳಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಚೈತ್ರ ಬಹುಳ ನವಮಿ ದಿನದಂದು ಶ್ರೀಮನ್ಮಹಾರಥೋತ್ಸವ ವೈಭವದಿಂದ ನೆರವೇರಿತು.
ಜಾತ್ರಾ ಮಹೋತ್ಸವವನ್ನು ಮುಜರಾಯಿ ಇಲಾಖೆ, ಹೊಸನಗರ ಇವರ ಆಶ್ರಯದಲ್ಲಿ ಹಾಗೂ ಶ್ರೀ ಶಂಭುಲಿಂಗೇಶ್ವರ ಸೇವಾ ಸಮಿತಿ (ರಿ) ಸಂಪೆಕಟ್ಟೆ ಇವರ ಸಮ್ಮುಖದಲ್ಲಿ ಆಯೋಜಿಸಲಾಗಿದೆ.
ಏಪ್ರಿಲ್ 12ರಂದು ಚೈತ್ರ ಬಹುಳ ದಶಮಿ ದಿನ ರುದ್ರ ಹೋಮ, ಚಂಡಿ ಹೋಮ ಹಾಗೂ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.
ಜಾತ್ರೆಯ ಅಂಗವಾಗಿ ಪ್ರತಿದಿನ ಅನ್ನಸಂತರ್ಪಣೆ (ಭೋಜನ ವ್ಯವಸ್ಥೆ) ಮಾಡಲಾಗುತ್ತಿದ್ದು, ಭಕ್ತರು ಸಹಾಯಧನ ನೀಡುವ ಮೂಲಕ ಕೈಜೋಡಿಸುತ್ತಿದ್ದಾರೆ.
ಜಾತ್ರೆ ಸಂದರ್ಭದಲ್ಲಿ ವಿವಿಧ ಅಂಗಡಿಗಳು, ಮಕ್ಕಳ ಆಟಿಕೆಗಳು, ಬಟ್ಟೆಗಳು ಹಾಗೂ ತಿಂಡಿ ಪದಾರ್ಥಗಳ ಮಳಿಗೆಗಳು ತೆರೆದಿವೆ. ದೇವಸ್ಥಾನವನ್ನು ಹೂವುಗಳು ಮತ್ತು ದೀಪಾಲಂಕಾರಗಳಿಂದ ಸಿಂಗಾರ ಮಾಡಲಾಗಿದ್ದು, ಮನಮೋಹಕ ವಾತಾವರಣ ನಿರ್ಮಾಣವಾಗಿದೆ. ಜಾತ್ರೆಗೆ ಆರಗ ಜ್ಞಾನೇಂದ್ರ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದರು.
ವರದಿ: ರಕ್ಷಿತ ಹೆಚ್. ಗೋಪಾಲ್ ಸಂಪೆಕಟ್ಟೆ.