Saturday, June 13, 2026
HomeCrimeಹಣಕಾಸು ವ್ಯವಹಾರ ವಿಚಾರಕ್ಕೆ ಮಾರಾಮಾರಿ, ಕೊಲೆ ಯತ್ನ

ಹಣಕಾಸು ವ್ಯವಹಾರ ವಿಚಾರಕ್ಕೆ ಮಾರಾಮಾರಿ, ಕೊಲೆ ಯತ್ನ

ಶಿರಸಿ: ಇಂಟೀರಿಯರ್ ಕಾಮಗಾರಿ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಪಂಚ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಲಾಮತ್ ನಗರ ನಿವಾಸಿ ತಾರೀಖ್ ಮಹಮ್ಮದ್ ಸಾಬ್ ಶೇಖ್ (33) ಅವರು ನೀಡಿದ ದೂರಿನ ಮೇರೆಗೆ ನೆಹರೂ ನಗರದ ಅಬ್ರಾರ್ ಅಬ್ದುಲ್ ಶುಕೂರ್ ಶೇಖ್ ಹಾಗೂ ಪರ್ವೇಜ್ ಮಹಮ್ಮದ್ ಅಬ್ದುಲ್ ಶುಕೂರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾರೀಖ್ ಅವರ ಮಾವ ಇಕ್ಬಾಲ್ ಫಕೀರ್ ಸಾಬ್ ಶೇಖ್ ಅವರು ನೆಹರೂ ನಗರದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಯ ಇಂಟೀರಿಯರ್ ಕಾಮಗಾರಿಯನ್ನು ಆರೋಪಿಗಳಿಗೆ ನೀಡಿದ್ದು, ಈ ಕೆಲಸಕ್ಕಾಗಿ ಮುಂಗಡವಾಗಿ ಸುಮಾರು 30 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಉಳಿದ ಕೆಲಸವನ್ನು ಮತ್ತೊಬ್ಬರಿಗೆ ನೀಡಲಾಗಿತ್ತು.

ಜೂನ್ 4ರಂದು ಸಂಜೆ ಆರೋಪಿಗಳು ಹೊಸ ಮನೆಯ ಬಳಿ ಬಂದು ಕಾಮಗಾರಿಯ ವಿಚಾರವಾಗಿ ವಾಗ್ವಾದ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಲೆಕ್ಕ ಕೇಳಿದ್ದಕ್ಕೆ ಕೋಪಗೊಂಡ ಪರ್ವೇಜ್ ಶೇಖ್ ಪಂಚ್‌ನಿಂದ ತಾರೀಖ್ ಅವರ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯನ್ನು ತಡೆಯಲು ಬಂದ ಸ್ನೇಹಿತ ಸುಹೇಲ್ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ ಅಬ್ರಾರ್ ಶೇಖ್ ಕೂಡ ಮತ್ತೊಂದು ಪಂಚ್ ಬಳಸಿ ತಲೆಗೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share