ಶಿರಸಿ: ಇಂಟೀರಿಯರ್ ಕಾಮಗಾರಿ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಪಂಚ್ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಲಾಮತ್ ನಗರ ನಿವಾಸಿ ತಾರೀಖ್ ಮಹಮ್ಮದ್ ಸಾಬ್ ಶೇಖ್ (33) ಅವರು ನೀಡಿದ ದೂರಿನ ಮೇರೆಗೆ ನೆಹರೂ ನಗರದ ಅಬ್ರಾರ್ ಅಬ್ದುಲ್ ಶುಕೂರ್ ಶೇಖ್ ಹಾಗೂ ಪರ್ವೇಜ್ ಮಹಮ್ಮದ್ ಅಬ್ದುಲ್ ಶುಕೂರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಾರೀಖ್ ಅವರ ಮಾವ ಇಕ್ಬಾಲ್ ಫಕೀರ್ ಸಾಬ್ ಶೇಖ್ ಅವರು ನೆಹರೂ ನಗರದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಯ ಇಂಟೀರಿಯರ್ ಕಾಮಗಾರಿಯನ್ನು ಆರೋಪಿಗಳಿಗೆ ನೀಡಿದ್ದು, ಈ ಕೆಲಸಕ್ಕಾಗಿ ಮುಂಗಡವಾಗಿ ಸುಮಾರು 30 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಉಳಿದ ಕೆಲಸವನ್ನು ಮತ್ತೊಬ್ಬರಿಗೆ ನೀಡಲಾಗಿತ್ತು.
ಜೂನ್ 4ರಂದು ಸಂಜೆ ಆರೋಪಿಗಳು ಹೊಸ ಮನೆಯ ಬಳಿ ಬಂದು ಕಾಮಗಾರಿಯ ವಿಚಾರವಾಗಿ ವಾಗ್ವಾದ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಲೆಕ್ಕ ಕೇಳಿದ್ದಕ್ಕೆ ಕೋಪಗೊಂಡ ಪರ್ವೇಜ್ ಶೇಖ್ ಪಂಚ್ನಿಂದ ತಾರೀಖ್ ಅವರ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯನ್ನು ತಡೆಯಲು ಬಂದ ಸ್ನೇಹಿತ ಸುಹೇಲ್ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಇದೇ ವೇಳೆ ಅಬ್ರಾರ್ ಶೇಖ್ ಕೂಡ ಮತ್ತೊಂದು ಪಂಚ್ ಬಳಸಿ ತಲೆಗೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ.