ಯಲ್ಲಾಪುರ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಮಹಾಬಲೇಶ್ವರ ವೆಂಕಟರಮಣ ಗಟ್ಟಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂನ್ 12ರಂದು ರಾತ್ರಿ ಸುಮಾರು 9.30ರ ವೇಳೆಗೆ ಇಡಗುಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-52ರ ಸಮೀಪದಲ್ಲಿರುವ ಅನಂತ ಮಹಾಬಲೇಶ್ವರ ಗಟ್ಟಿ ಅವರ ಬಾಳೆಕಾಯಿ ಅಂಗಡಿ ಬಳಿ ಈ ಘಟನೆ ನಡೆದಿದೆ.
ಫಿರ್ಯಾದಿಯ ಚಿಕ್ಕಪ್ಪ ಅನಂತ ಗಟ್ಟಿ ಅವರು ಕಿರಾಣಿ ಸಾಮಗ್ರಿ ತರಲು ಹೆದ್ದಾರಿ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಕೆಎ-31/ವೈ-9963 ಸಂಖ್ಯೆಯ ಮೋಟಾರ್ ಸೈಕಲ್ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಅನಂತ ಗಟ್ಟಿ ಅವರ ಬಲಗಾಲಿನ ಪಾದದ ಹಿಮ್ಮಡಿ ಭಾಗಕ್ಕೆ ಗಾಯವಾಗಿದೆ. ಬೈಕ್ ಸವಾರನನ್ನು ಹುಟಕಮನೆ, ಬಾಳಗಿಮನೆ ನಿವಾಸಿ ಸುಬ್ರಹ್ಮಣ್ಯ ಬಾಬು ಸಿದ್ದಿ (25) ಎಂದು ಗುರುತಿಸಲಾಗಿದ್ದು, ಅಪಘಾತದ ವೇಳೆ ಬೈಕ್ನಲ್ಲಿ ವಿಷ್ಣು ಸುಬ್ಬಾ ಸಿದ್ದಿ ಎಂಬಾತ ಕೂಡ ಕೂತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.