ದಾವಣಗೆರೆಯಲ್ಲಿ ಬಂಧಿತ ಯುವಕನಿಂದ ಬೆಚ್ಚಿಬೀಳಿಸುವ ಮಾಹಿತಿ
ದಾವಣಗೆರೆ: ಹರಿಹರ ತಾಲೂಕಿನ ಬನ್ನಿಕೋಡಿಯಲ್ಲಿ ಬಂಧಿತಾನಾದ ಉತ್ತರ ಪ್ರದೇಶ ಮೂಲದ ಶಂಕಿತ ಯುವಕನ ವಿಚಾರಣೆ ವೇಳೆ ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸ್ಫೋಟದ ಸಂಚು ರೂಪಿಸುವ ಬಗ್ಗೆ ಆತ ಚರ್ಚಿಸಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಲಖ್ನೋತಿ ಗ್ರಾಮದ ಸೋಹೆಲ್ (20) ಎಂಬಾತನನ್ನು ಮಂಗಳವಾರ ಬಂಧಿಸಲಾಗಿತ್ತು. ಆತನ ಮೊಬೈಲ್ ಪರಿಶೀಲನೆ ವೇಳೆ ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕ, ಶಂಕಾಸ್ಪದ ಸಂದೇಶಗಳು, ಶಸ್ತ್ರಾಸ್ತ್ರಗಳ ಚಿತ್ರಗಳು ಹಾಗೂ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
‘ರಾಣಾಜೀ’ ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದ ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಉರ್ದು ಮಿಶ್ರಿತ ಹಿಂದಿಯಲ್ಲಿ ನಡೆಸಿದ ಸಂಭಾಷಣೆಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸಲು ಬಯಸಿರುವುದಾಗಿ ಹಾಗೂ ಅದಕ್ಕಾಗಿ ಯೋಜನೆ ರೂಪಿಸುತ್ತಿರುವುದಾಗಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.ಇದೇ ವೇಳೆ ಪಾಕಿಸ್ತಾನ ಮೂಲದ ಕೆಲವು ವಾಟ್ಸಾಪ್ ಗುಂಪುಗಳು ಹಾಗೂ ಚಾನಲ್ಗಳೊಂದಿಗೆ ಆತ ಸಂಪರ್ಕದಲ್ಲಿದ್ದ ಮಾಹಿತಿ ಕೂಡ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.
ಮೊಬೈಲ್ನಲ್ಲಿ ಹಲವು ಶಂಕಾಸ್ಪದ ಅಪ್ಲಿಕೇಶನ್ಗಳೂ ಪತ್ತೆಯಾಗಿವೆ.ಪೇಂಟರ್ ಕೆಲಸದ ನೆಪದಲ್ಲಿ ಕಳೆದ ಕೆಲ ವಾರಗಳಿಂದ ಬನ್ನಿಕೋಡಿ ಗ್ರಾಮದಲ್ಲಿ ವಾಸಿಸುತ್ತಿದ್ದ ಸೋಹೆಲ್ನನ್ನು ಬಂಧಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ತುಮಕೂರಿಗೆ ಕರೆದೊಯ್ದಿದ್ದರು. ಈ ಪ್ರಕರಣಕ್ಕೂ ಈ ಹಿಂದೆ ತುಮಕೂರಿನಲ್ಲಿ ಬಂಧನಕ್ಕೊಳಗಾಗಿದ್ದ ಅಲ್ಲಾಭಕ್ಷಿ ಪ್ರಕರಣಕ್ಕೂ ಕೆಲವು ಸಾಮ್ಯತೆಗಳಿರುವ ಶಂಕೆ ವ್ಯಕ್ತವಾಗಿದೆ.
ವಿಚಾರಣೆ ಬಳಿಕ ಆರೋಪಿಯನ್ನು ಹರಿಹರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.