ನಾಗಮಂಗಲ: ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಟಿ.ಬಿ. ಬಡಾವಣೆಯಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಮಾತೃ ವಂದನ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಯಿತು.
“ತಾಯಿಯೇ ಮೊದಲ ಗುರು” ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ 10 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ತಾಯಿಯರ ಪಾದಪೂಜೆ ನೆರವೇರಿಸಿ ಕೃತಜ್ಞತೆ ಸಲ್ಲಿಸಿದ ಅಪರೂಪದ ದೃಶ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಿದ್ವಾನ್ ರಾಘವೇಂದ್ರ ಜೀ ಉಪ್ಪಾರಹಳ್ಳಿ ಅವರು ಗುರುಪೂರ್ಣಿಮೆಯ ಮಹತ್ವ, ತಂದೆ-ತಾಯಿ ಹಾಗೂ ಗುರುಜನರನ್ನು ಗೌರವಿಸುವ ಸಂಸ್ಕಾರದ ಅಗತ್ಯವನ್ನು ವಿವರಿಸಿದರು. ನಿತ್ಯ ಜೀವನದಲ್ಲಿ ಮಕ್ಕಳೊಂದಿಗೆ ಸ್ತೋತ್ರ ಪಾರಾಯಣ, ದೇವಾಲಯದಲ್ಲಿ ಸಾಮೂಹಿಕ ಭಜನೆ ಹಾಗೂ ಸ್ತೋತ್ರ ಪಠಣದಿಂದ ಉಂಟಾಗುವ ಸಕಾರಾತ್ಮಕ ಪರಿಣಾಮಗಳ ಕುರಿತು ಸರಳವಾಗಿ ತಿಳಿಸಿ, ಗುರು ಸ್ತೋತ್ರಗಳ ಸಾಮೂಹಿಕ ಪಾರಾಯಣಕ್ಕೂ ಮುನ್ನಡೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಸುಶೀಲ್ ಅವರು ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ಅಲ್ಲದೆ, ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸೇವಾಕರ್ತರ ಸಹಯೋಗದಲ್ಲಿ ಲೇಖನ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಲಾಯಿತು.ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ಗುರು-ತಾಯಿ-ತಂದೆಯರ ಗೌರವವನ್ನು ಸಾರುವ ಈ ಅರ್ಥಪೂರ್ಣ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.