ತುಮಕೂರು: ಮದುವೆ ಸಮಾರಂಭಕ್ಕೆ ಹೋಗಿಬರುತ್ತೇನೆಂದು ಚಿಕ್ಕಮಗಳೂರಿಗೆ ತೆರಳಿದ್ದ ಕುಣಿಗಲ್ ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಮಹಿಳೆ ಕುಣಿಗಲ್ನ ಆಕೆಯ ಪ್ರಿಯತಮನ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕಾ (28) ಹಾಸನಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದಳು. ಆದರೆ ಆಕೆ ನಿಗೂಢವಾಗಿ ಕಾಣೆಯಾಗಿರುವ ಘಟನೆ ಹಾಸನದ ಬೇಲೂರು ತಾಲೂಕಿನ ಕಲ್ಕೆರೆ ಬಳಿ ನಡೆದಿತ್ತು.
ಪ್ರಿಯಾಂಕಾ ನಾಪತ್ತೆಯಾಗಿದ್ದ ಸ್ಥಳದಲ್ಲಿ ಆಕೆಯ ಬಟ್ಟೆಗಳು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ,ಮಹಿಳೆ ನಾಪತ್ತೆಯಾಗಿದ್ದಲ್ಲದೆ, ಕೊಲೆಯಾಗಿರುವ ಸಂಶಯ ಮೂಡಿಸಿತ್ತು. ಆಕೆಯನ್ನು ಯಾರೋ ಕೊಲೆ ಮಾಡಿ ಸಮೀಪದಲ್ಲಿರುವ ಕೆರೆಗೆ ಶವ ಎಸೆದಿರುವ ಅನುಮಾನವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕುಣಿಗಲ್ನ ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರಿಗೆ ಸ್ಥಳೀಯ ಪೊಲೀಸರು ಜೊತೆಯಾಗಿದ್ದರು. ಎರಡು ದಿನಗಳಿಂದಲೂ ಪ್ರಿಯಾಂಕಾ ಡೇವಿಡ್ ಮನೆಯಲ್ಲಿಯೇ ವಾಸವಿದ್ದರು ಎನ್ನಲಾಗಿದೆ.
ಆದರೆ ಇದೀಗ ಮಹಿಳೆ ಕುಣಿಗಲ್ನಲ್ಲಿ ಪ್ರತ್ಯಕ್ಷವಾಗಿದ್ದು, ಘಟನೆಯ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.