ಮುಂಡಗೋಡ: ತಾಲೂಕಿನ ಕಾತೂರು ವಲಯದ ರಾಮಾಪುರ ಶಾಖೆಯ ಸಿಂಗನಳ್ಳಿ ಗ್ರಾಮದ ಶಾಂತೇಶ್ ಪಾಟೀಲ್ ಅವರ ಮನೆಯ ಮುಂದೆ ಮಿಡಿ ನಾಗರಹಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮನೆಯ ಮುಂದೆ ನಾಗರಹಾವು ಕಾಣಿಸಿಕೊಂಡಿರುವುದನ್ನು ಗಮನಿಸಿದ ಅರಣ್ಯ ವೀಕ್ಷಕ ಸಂತೋಷ್ ಸಿಂಗನಳ್ಳಿ ಅವರು ದೂರವಾಣಿ ಮೂಲಕ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ತೆರಳಿದ ಅವರು ಹಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಹಿಡಿದು, ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.
ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕ ಸಂತೋಷ್ ಸೇರಿದಂತೆ ಶಿವಾಜಿ ಪಾಟೀಲ್, ಶಂಬು ಪಾಟೀಲ್ ಹಾಗೂ ಪರಶು ಅಲಳ್ಳಿ ಉಪಸ್ಥಿತರಿದ್ದರು.
ಹಾವುಗಳು ಕಂಡುಬಂದಾಗ ಅವುಗಳನ್ನು ಹಿಡಿಯಲು ಅಥವಾ ಓಡಿಸಲು ಸಾರ್ವಜನಿಕರು ಸ್ವತಃ ಮುಂದಾಗದೆ, ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಹಾವು ರಕ್ಷಕರಿಗೆ ಮಾಹಿತಿ ನೀಡುವುದು ಸುರಕ್ಷಿತ.ಹಾವಿನ ಬಗ್ಗೆ ಭಯ ಬೇಡ, ಆದರೆ ಜಾಗ್ರತೆ ಇರಲಿ ಎಂದು ಉರಗತಜ್ಞ ಸುನೀಲ್ ಹೊನ್ನಾವರ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.