ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ–ದೇವಿಹಾಳ ಮಾರ್ಗದ ದಂಡೇರಿ ಮರಿಯಮ್ಮ ದೇವಸ್ಥಾನದಲ್ಲಿ ದುಷ್ಕರ್ಮಿಗಳು ದೇವಿಯ ಮೂರ್ತಿಯನ್ನು ಭಗ್ನಗೊಳಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ದೇವಸ್ಥಾನದ ಅರ್ಚಕ ದ್ಯಾಮಣ್ಣ ಲಮಾಣಿ ನೀಡಿದ ಮಾಹಿತಿಯಂತೆ, ಬುಧವಾರ ರಾತ್ರಿ 10 ಗಂಟೆಯವರೆಗೆ ದೇವಸ್ಥಾನದಲ್ಲಿದ್ದು ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಪೂಜೆಗಾಗಿ ದೇವಸ್ಥಾನ ತೆರೆಯಲು ಹೋದಾಗ ಕೀಲಿಕೈ ಮುರಿದು ಬಾಗಿಲು ತೆರೆಯಲ್ಪಟ್ಟಿರುವುದು ಗಮನಕ್ಕೆ ಬಂದಿದೆ. ಒಳಗೆ ಹೋಗಿ ನೋಡಿದಾಗ ಮರಿಯಮ್ಮ ದೇವಿಯ ಮೂರ್ತಿಯ ಹಣೆ, ಕಣ್ಣು, ಮೂಗು ಹಾಗೂ ಬಾಯಿ ಸೇರಿ ಮುಖಭಾಗವನ್ನು ದುಷ್ಕರ್ಮಿಗಳು ಒಡೆದುಹಾಕಿರುವುದು ಕಂಡುಬಂದಿದೆ. ವಿಷಯ ತಿಳಿದ ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದ್ದು, ದೌಡಾಯಿಸಿ ಬಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಭಕ್ತರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿಎಸ್ಐ ಟಿ.ಕೆ. ರಾಠೋಡ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೂರಾರು ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೇ ರಾತ್ರಿ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ಮೂರ್ತಿಯನ್ನೂ, ಕೆಲವು ದಿನಗಳ ಹಿಂದೆ ಶಿಂಘಟಾಲೂರಿನಲ್ಲಿ ಶಿವಲಿಂಗ ಹಾಗೂ ಬಸವಣ್ಣನ ಮೂರ್ತಿಯನ್ನೂ ಭಗ್ನಗೊಳಿಸಿದ ಘಟನೆಗಳು ನಡೆದಿರುವುದು ಭಕ್ತರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದುಷ್ಕರ್ಮಿಗಳ ಶೀಘ್ರ ಪತ್ತೆಗೆ ಭಕ್ತರು ಆಗ್ರಹಿಸಿದ್ದಾರೆ.