ಭೂಮಿ ಹಕ್ಕು ಅನಿವಾರ್ಯ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಶಿರಸಿ/ಬೈಂದೂರು: ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಕಳೆದ 34 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟ ಶ್ಲಾಘನೀಯವಾಗಿದ್ದು, ಅರಣ್ಯವಾಸಿಗಳಿಗೆ ಕಾನೂನುಬದ್ಧ ಭೂಮಿ ಹಕ್ಕು ದೊರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಕ್ರಮ ಕೈಗೊಂಡು ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದು ಶ್ರೀ ಶ್ರೀ ಶ್ರೀ ಪರಮ ಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡುವ ವಿಚಾರದಲ್ಲಿ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅವರ ಹಕ್ಕಿನ ಕುರಿತು ಸರ್ಕಾರ ಸ್ಪಷ್ಟವಾದ ಕ್ರಿಯಾ ಯೋಜನೆ ರೂಪಿಸಿ, ಅರಣ್ಯವಾಸಿಗಳ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ಅವರು ಕಳೆದ 34 ವರ್ಷಗಳಿಂದ ಅರಣ್ಯವಾಸಿಗಳ ಪರವಾಗಿ ನಡೆಸಿಕೊಂಡು ಬಂದಿರುವ ಕಾನೂನುಬದ್ಧ ಹಾಗೂ ಸಂಘಟನಾತ್ಮಕ ಹೋರಾಟದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತರಿದ್ದರು. ವೇದಿಕೆಯ ಸಂಚಾಲಕ ಮಹಾಬಲೇಶ್ವರ ನಾಯ್ಕ್ ಬೇಡ್ಕಣಿ, ಮಂಜು ಮರಾಠಿ ನಾಗೂರು, ರಾಜೇಶ್ ಮಿತ್ರ ನಾಯ್ಕ್ ತೆಂಗಿನಕೇರಿ, ಕಿರಣ ಮರಾಠಿ ದೇವನಳ್ಳಿ, ರಾಜು ಎಂ. ಗೌಡ ಕತಗಾಲ, ಅನಿತಾ ಗೌಡ ಹೊಸಾಡು, ಅನಂತ ಗಣು ಮರಾಠಿ, ವೆಂಕಟೇಶ ಪಟಗಾರ, ಯೋಗೀಂದ್ರ ಗೌಡ ಕಂದವಳ್ಳಿ, ಗಜಾನನ ಮರಾಠಿ, ವಿನಾಯಕ ನಾಯ್ಕ್ ಕೋಡ್ಕಣಿ, ಸಂಕೇತ ನಾಯ್ಕ್ ಸಿದ್ದಾಪುರ, ಸುಲೋಚನ ಮುಕ್ತಿಯಾಣ, ಪಾಂಡುರಂಗ ವಾಸು ನಾಯ್ಕ್ ಹಂಜಗಿ, ಜಗದೀಶ್ ನಾಯ್ಕ್ ಶಿರಳಗಿ, ಮಾದೇವ ಮುಕ್ತಿ, ಬರಗಿ ಲಕ್ಷ್ಮಣ ನಾಯ್ಕ್, ಶೇಖರ ನಾಯ್ಕ್, ಲಲಿತಾ ಮಂಜುನಾಥ ಮರಾಠಿ ನಾಗೂರು, ನಾರಾಯಣ ದೇವು ಮರಾಠಿ, ತಿರುಮಲಾ ಸುಬ್ಬ ಮರಾಠಿ ಕಳುಗಾರ್ ಸೇರಿದಂತೆ ನೂರಾರು ಅರಣ್ಯವಾಸಿಗಳು ಭಾಗವಹಿಸಿದ್ದರು.
ಭೂಮಿ ಹಕ್ಕಿನ ಹೋರಾಟದ ಜೊತೆಗೆ ಅರಣ್ಯವಾಸಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಗಿಡ ನೆಡುವಂತಹ ಕಾರ್ಯಗಳನ್ನು ಸಂಘಟಿಸುತ್ತಿರುವುದು ಮೆಚ್ಚುವಂತಹದ್ದು. ಪರಿಸರವನ್ನು ಬೆಳೆಸುವ ಹಾಗೂ ಸಂರಕ್ಷಿಸುವ ಪ್ರಜ್ಞೆಯನ್ನು ಪ್ರತಿಯೊಬ್ಬ ನಾಗರಿಕರೂ ಬೆಳೆಸಿಕೊಳ್ಳಬೇಕು ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.