ಅಂಕೋಲಾ: ಬೋಡ್ರಸ್ ಅನ್ಲೋಡ್ ಮಾಡಲು ಕ್ರಷರ್ ಬಳಿ ನಿಲ್ಲಿಸಿದ್ದ ಡಂಪರ್ ಏಕಾಏಕಿ ಇಳಿಜಾರಿನಲ್ಲಿ ಚಲಿಸಿ, ಅದರ ಚಾಲಕನ ಮೇಲೆಯೇ ಹರಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ.
ಮೃತರನ್ನು ಹಟ್ಟಿಕೇರಿ ನಿವಾಸಿ ಮಾರುತಿ ರಾಮಚಂದ್ರ ನಾಯ್ಕ (51) ಎಂದು ಗುರುತಿಸಲಾಗಿದೆ. ಘಟನೆ ಆ.25ರಂದು ಸಂಜೆ ಸುಮಾರು 5.15ರ ವೇಳೆಗೆ ನಡೆದಿದೆ.
ಮಾರುತಿ ನಾಯ್ಕ ಅವರು ರಾಜು ಕಳಸ್ ಎಂಬುವವರಿಗೆ ಸೇರಿದ ಕೆಎ-30/ಎ-1223 ನೋಂದಣಿ ಸಂಖ್ಯೆಯ ಡಂಪರ್ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬೋಡ್ರಸ್ ತುಂಬಿಕೊಂಡು ಕ್ರಷರ್ಗೆ ತೆರಳಿದ್ದ ಅವರು, ಕ್ರಷರ್ ಮಶೀನ್ನ ಮೇಲ್ಭಾಗಕ್ಕೆ ವಾಹನ ಚಲಾಯಿಸಿಕೊಂಡು ಹೋಗಿ ಬೋಡ್ರಸ್ ಅನ್ಲೋಡ್ ಮಾಡಲು ಮುಂದಾಗಿದ್ದರು.
ಬೋಡ್ರಸ್ ಅನ್ಲೋಡ್ ಮಾಡುವ ಸ್ಥಳವನ್ನು ಸಮತಟ್ಟು ಮಾಡಿರಲಿಲ್ಲ. ಇಳಿಜಾರು ಪ್ರದೇಶವಾಗಿದ್ದರೂ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಹಾಗೂ ವಾಹನ ಅನ್ಲೋಡ್ ಮಾಡುವ ಸಂದರ್ಭದಲ್ಲಿ ಸಹಾಯಕ್ಕಾಗಿ ಯಾರನ್ನೂ ನಿಯೋಜಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಮಾರುತಿ ನಾಯ್ಕ ಅವರು ಡಂಪರ್ ನಿಲ್ಲಿಸಿ ಬೋಡ್ರಸ್ ಅನ್ಲೋಡ್ ಮಾಡಿದ ಬಳಿಕ ವಾಹನದಿಂದ ಇಳಿದು ಅದರ ಮುಂಭಾಗದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಡಂಪರ್ ಏಕಾಏಕಿ ಇಳಿಜಾರಿನ ಮಣ್ಣಿನ ರಸ್ತೆಯಲ್ಲಿ ಚಲಿಸಿ ಮಾರುತಿ ನಾಯ್ಕ ಅವರಿಗೆ ಡಿಕ್ಕಿ ಹೊಡೆದು ಅವರ ಮೇಲೆಯೇ ಹರಿದಿದೆ.
ವಾಹನ ಹರಿದ ಪರಿಣಾಮ ಕಾಲು, ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಮಾರುತಿ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಮೃತರ ಸಂಬಂಧಿ ಜಗದೀಶ ಗೋವಿಂದ ನಾಯ್ಕ (49) ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.