ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ನಡೆಯುತ್ತಿರುವ ಬಳ್ಳಾರಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ರೂಪಾಲಿ ಎಸ್. ನಾಯ್ಕ ಅವರು, ಗ್ಯಾರಂಟಿ ಯೋಜನೆಗಳು, ಯುವಕರ ಉದ್ಯೋಗ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸಿದರು.
ಕೇವಲ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದರಿಂದ ಪ್ರತಿಯೊಂದು ಕುಟುಂಬದ ಬದುಕು ಬದಲಾಗುವುದಿಲ್ಲ. ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ದೊರೆಯುವಂತಹ ವ್ಯವಸ್ಥೆ ನಿರ್ಮಾಣವಾದರೆ, ಆ ಕುಟುಂಬ ತನ್ನ ಬದುಕನ್ನು ಸ್ವಾಭಿಮಾನದಿಂದ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರೈತರ ಸಂಕಷ್ಟದ ಬಗ್ಗೆಯೂ ಮಾತನಾಡಿದ ರೂಪಾಲಿ ನಾಯ್ಕ, ರೈತ ಬೆಳೆ ಬೆಳೆಯುತ್ತಾನೆ. ಆದರೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ ಎಂಬ ಖಾತರಿ ಇಲ್ಲ. ಯಾವ ಬೆಳೆ ಬೆಳೆಯಬೇಕು, ಮಾರುಕಟ್ಟೆಯಲ್ಲಿ ಬೆಲೆ ಹೇಗಿರಲಿದೆ ಹಾಗೂ ಬೆಳೆ ಕೈಗೆ ಬಂದಾಗ ಪರಿಸ್ಥಿತಿ ಏನಾಗಲಿದೆ ಎಂಬ ಪ್ರಶ್ನೆಗಳಿಗೆ ರೈತನಿಗೆ ಇನ್ನೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಕೇವಲ ಸಮೀಕ್ಷೆ ನಡೆಸುವುದಕ್ಕಿಂತ ರೈತನ ಬೆವರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡಬೇಕು. ರೈತರ ಬದುಕಿಗೆ ಸ್ಥಿರತೆ, ಯುವಕರಿಗೆ ಉದ್ಯೋಗ ಹಾಗೂ ಕುಟುಂಬಗಳಿಗೆ ಆರ್ಥಿಕ ಭದ್ರತೆ ಕಲ್ಪಿಸುವಂತಹ ಆಡಳಿತ ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದರು.
ಜನರ ಸಮಸ್ಯೆಗಳಿಗೆ ಪರಿಹಾರ ಬೇಕು, ಕೇವಲ ಭರವಸೆಗಳಲ್ಲ. ರೈತನಿಗೆ ನ್ಯಾಯ ಬೇಕು, ಕೇವಲ ಸಮೀಕ್ಷೆಯಲ್ಲ. ಯುವಕರಿಗೆ ಉದ್ಯೋಗ ಬೇಕು, ಕೇವಲ ಗ್ಯಾರಂಟಿಯಲ್ಲ ಎಂದು ರೂಪಾಲಿ ನಾಯ್ಕ ಹೇಳಿದರು.
ಬಳ್ಳಾರಿ ಚಲೋ ಪ್ರತಿಭಟನೆಯ ಮೂಲಕ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಲಾಗುತ್ತಿದ್ದು, ರೈತರು ಹಾಗೂ ಯುವಕರ ಪರವಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.