ಭಟ್ಕಳ: ಅಡಿಕೆ ಕೊಯ್ಯಲು ಮರ ಹತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು 62 ವರ್ಷದ ಕೃಷಿಕರೊಬ್ಬರು ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪದ ಕುಂಟವಾಣಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕುಂಟವಾಣಿ ಗ್ರಾಮದ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ (62) ಎಂದು ಗುರುತಿಸಲಾಗಿದೆ.
ಆ.23ರಂದು ಸಂಜೆ ಸುಮಾರು 6.15ರ ವೇಳೆಗೆ ಶ್ರೀನಿವಾಸ ಶೆಟ್ಟಿ ಅವರು ತಮ್ಮ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕೈ–ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ತೋಟದ ಮೂಲಕ ಹಾದುಹೋಗಿದ್ದ 11 ಕೆ.ವಿ ವಿದ್ಯುತ್ ಮಾರ್ಗದ ಅಲ್ಯೂಮಿನಿಯಂ ಏಣಿಗೆ ತಾಗಿ ಕೆಳಗೆ ಬಿದ್ದಿರುವ ಸಾಧ್ಯತೆಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಪುತ್ರ ಪ್ರಶಾಂತ ಶ್ರೀನಿವಾಸ ಶೆಟ್ಟಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.