ವಿದೇಶದ ಕನಸು ತೋರಿಸಿ ₹2.49 ಲಕ್ಷ ವಂಚನೆ ಪ್ರಕರಣ
ಭಟ್ಕಳ: ಉತ್ತಮ ಉದ್ಯೋಗದ ಆಸೆಯಲ್ಲಿ ವಿದೇಶಕ್ಕೆ ತೆರಳುವ ಕನಸು ಕಂಡಿದ್ದ ಯುವಕನೊಬ್ಬ, ಅದೇ ಕನಸಿನ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಆರೋಪ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹2.49 ಲಕ್ಷ ಹಣ ಹಾಗೂ ಪಾಸ್ಪೋರ್ಟ್ ಪಡೆದು, ಬಳಿಕ ನಕಲಿ ಉದ್ಯೋಗ ಸಂಬಂಧಿತ ದಾಖಲೆಗಳನ್ನು ತೋರಿಸಿ ವಂಚನೆ ಎಸಗಿರುವ ಆರೋಪದಡಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಯ್ಕಿಣಿಯ ಜನತಾ ಕಾಲೋನಿಯ ನಿವಾಸಿ ಅನಿಲ ಮಂಜಯ್ಯ ನಾಯ್ಕ (24) ಅವರು ನೀಡಿದ ದೂರಿನ ಮೇರೆಗೆ, ಮಹಮದ್ ಅಯೂಬ್ ಅಲಿ (ಮೂಲತಃ ಮಣಿಪುರ ರಾಜ್ಯದ ಇಂಫಾಲ್, ಪ್ರಸ್ತುತ ಮುಗ್ದುಂ ಕಾಲೋನಿ 6ನೇ ಕ್ರಾಸ್, ಭಟ್ಕಳ), ಅಬ್ದುಲ್ ಮುತಾಲಿಬ್ ಕುಂದನಗೂಡ (ಉಮ್ಮರ್ ಸ್ಟ್ರೀಟ್, ಭಟ್ಕಳ) ಹಾಗೂ ಅಲ್ತಾಫ್ (ಭಟ್ಕಳ) ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ವಿದೇಶದಲ್ಲಿ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿ ಅನಿಲ್ ಅವರಿಂದ ₹2,49,000 ನಗದು ಹಾಗೂ ಪಾಸ್ಪೋರ್ಟ್ ಪಡೆದಿದ್ದರು. ಆದರೆ, ಈವರೆಗೆ ಉದ್ಯೋಗ ನೀಡದೇ, ಪಡೆದ ಹಣ ಹಾಗೂ ಪಾಸ್ಪೋರ್ಟ್ ಅನ್ನು ಹಿಂತಿರುಗಿಸದೇ, ನಕಲಿ ಉದ್ಯೋಗದ ದಾಖಲಾತಿಗಳನ್ನು ತೋರಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉದ್ಯೋಗಕ್ಕಾಗಿ ಹಣ ಪಾವತಿಸುವ ಮೊದಲು ಸಂಸ್ಥೆಯ ವಿಶ್ವಾಸಾರ್ಹತೆ, ದಾಖಲೆಗಳು ಮತ್ತು ಅಧಿಕೃತ ಅನುಮತಿಗಳನ್ನು ಪರಿಶೀಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಈ ಪ್ರಕರಣವೂ ಅಂತಹ ವಂಚನೆಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದಂತಾಗಿದೆ.