Thursday, July 23, 2026
Join WhatsApp Group
HomeLocal Newsಮೊಳೆಗಳಿಂದ ಮುಕ್ತಿ ಪಡೆದ ಮರಗಳು

ಮೊಳೆಗಳಿಂದ ಮುಕ್ತಿ ಪಡೆದ ಮರಗಳು

ಫಲಿಸಿದ Canara Next ವರದಿ | ಈಗ ಅಕೇಶಿಯಾ ಕಂಬಗಳಿಂದಲೇ ಹೊಸ ಬೇಲಿ

ಯಲ್ಲಾಪುರ: ಜುಲೈ 13ರಂದು Canara Next ಪ್ರಕಟಿಸಿದ್ದ ʻಹೆಮ್ಮರದ ಹೃದಯಕ್ಕೆ ಮೊಳೆ! ಇದು ಅರಣ್ಯ ಸಂರಕ್ಷಣೆ!ʼ ವರದಿಗೆ ಅರಣ್ಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಆ ಪ್ರದೇಶದಲ್ಲಿ ಮರಗಳಿಗೆ ಹೊಡೆದಿದ್ದ ಕಬ್ಬಿಣದ ಮೊಳೆಗಳನ್ನು ತೆರವುಗೊಳಿಸಿ, ಹೊಸದಾಗಿ ಅಕೇಶಿಯಾ ಮರದ ಕಂಬಗಳನ್ನು ಬಳಸಿ ನಿಯಮಾನುಸಾರ ಪುನಃ ಮುಳ್ಳುತಂತಿ ಬೇಲಿ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ.

ವರದಿ ಪ್ರಕಟವಾದ ಬಳಿಕ ಸ್ಥಳೀಯ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರಿಂದಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಇದೀಗ, ಹಿಂದೆ ಜೀವಂತ ಮರಗಳನ್ನೇ ಕಂಬಗಳಾಗಿ ಬಳಸಿದ್ದ ಜಾಗದಲ್ಲಿ ಅವುಗಳನ್ನು ಮುಕ್ತಗೊಳಿಸಿ, ಪ್ರತ್ಯೇಕ ಕಂಬಗಳನ್ನು ನೆಟ್ಟು ಬೇಲಿ ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ… https://canaranext.com/forest-conservation-or-cruelty-to-trees-yellapur-barbed-wire-fence/

ಈ ಕುರಿತು ಪ್ರತಿಕ್ರಿಯಿಸಿದ ಯಲ್ಲಾಪುರ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹಿಮವತಿ ಭಟ್, ಸಂದರ್ಭದಲ್ಲಿ ಶಾಶ್ವತ ಬೇಲಿ ನಿರ್ಮಾಣಕ್ಕೆ ಸಮರ್ಪಕ ಅನುದಾನ ಲಭ್ಯವಾಗಿರಲಿಲ್ಲ. ನೆಟ್ಟಿದ್ದ ಸಸಿಗಳನ್ನು ದನಕರುಗಳು ತಿನ್ನದಂತೆ ತಾತ್ಕಾಲಿಕವಾಗಿ ಜೀವಂತ ಮರಗಳಿಗೆ ಮುಳ್ಳುತಂತಿ ಕಟ್ಟಲಾಗಿತ್ತು. ಇದೀಗ ಅನುದಾನ ಬಿಡುಗಡೆಯಾಗಿರುವುದರಿಂದ ನಿಯಮಾನುಸಾರ ಬೇಲಿ ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಕಾಮಗಾರಿಯ ಮತ್ತೊಂದು ವಿಶೇಷವೆಂದರೆ, ಬೇಲಿಗೆ ಬಳಸುತ್ತಿರುವ ಕಂಬಗಳು ಹೊರಗಿನಿಂದ ತರಲಾಗಿಲ್ಲ. ಅರಣ್ಯ ಇಲಾಖೆಯ ನೆಡುತೋಪಿನಲ್ಲೇ ಬೆಳೆಸಿದ್ದ ಅಕೇಶಿಯಾ ಮರಗಳಿಂದಲೇ ಕಂಬಗಳನ್ನು ತಯಾರಿಸಿ ನೆಡಲಾಗುತ್ತಿದೆ. ಇದರಿಂದ ಜೀವಂತ ಮರಗಳಿಗೆ ಮೊಳೆ ಹೊಡೆಯುವ ಅಗತ್ಯ ತಪ್ಪಿದೆ.

ಅರಣ್ಯ ಸಂರಕ್ಷಣೆಯ ಉದ್ದೇಶ ಎಷ್ಟೇ ಶ್ಲಾಘನೀಯವಾಗಿದ್ದರೂ, ಅದರ ಹೆಸರಿನಲ್ಲಿ ಜೀವಂತ ಮರಗಳಿಗೆ ಹಾನಿಯಾಗಬಾರದು ಎಂಬ ಪ್ರಶ್ನೆಯನ್ನು Canara Next ತನ್ನ ವರದಿಯಲ್ಲಿ ಎತ್ತಿಹಿಡಿದಿತ್ತು. ಈಗ ಅರಣ್ಯ ಇಲಾಖೆ ಅದಕ್ಕೆ ಸ್ಪಂದಿಸಿ ಕ್ರಮ ಕೈಗೊಂಡಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಅರಣ್ಯವನ್ನು ರಕ್ಷಿಸುವಾಗ ಅರಣ್ಯದ ಜೀವಂತ ಮರಗಳನ್ನೂ ಸಮಾನ ಕಾಳಜಿಯಿಂದ ಕಾಪಾಡಬೇಕು ಎಂಬ ಸಂದೇಶಕ್ಕೆ ಈ ಬದಲಾವಣೆ ಉತ್ತಮ ಉದಾಹರಣೆಯಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share