ಕುಮಟಾ: ದೋಣಿ ನಿಲ್ಲಿಸುವ ಜಾಗದ ವಿಚಾರವಾಗಿ ಉಂಟಾದ ವಿವಾದ ಕತ್ತಿಯಿಂದ ಹಲ್ಲೆ ನಡೆಸುವ ಹಂತಕ್ಕೆ ತಲುಪಿದ್ದು, ವ್ಯಕ್ತಿಯೊಬ್ಬರಿಗೆ ಗಾಯವಾದ ಘಟನೆ ಕುಮಟಾ ತಾಲೂಕಿನ ಮೂಡಂಗಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಂಗಿ ನಿವಾಸಿ ರವೀಂದ್ರ ಜೋಗಿ ಮೂಡಂಗಿ (55) ಗಾಯಗೊಂಡವರಾಗಿದ್ದು, ಸಾಣಿಕಟ್ಟಾ ನಿವಾಸಿಗಳಾದ ಅರವಿಂದ ತಿಮ್ಮಪ್ಪ ನಾಯ್ಕ ಹಾಗೂ ತಿಮ್ಮಪ್ಪ ತಿಪ್ಪ ನಾಯ್ಕ ಆರೋಪಿಗಳು.
ರವೀಂದ್ರ ಅವರು ಖರೀದಿಸಿದ್ದ ಪಾತಿ ದೋಣಿಯನ್ನು ತಮ್ಮ ಮನೆಯ ಸಮೀಪದ ಖಾರ್ಲೆಂಡ್ ಕಟ್ಟಿನ ಮೇಲೆ ಇಟ್ಟಿದ್ದರು. ಜುಲೈ 1ರಂದು ಬೆಳಿಗ್ಗೆ ಸುಮಾರು 10.30ರ ವೇಳೆಗೆ ಅರವಿಂದ ನಾಯ್ಕ ದೋಣಿಯನ್ನು ಕತ್ತಿಯಿಂದ ಕತ್ತರಿಸುತ್ತಿದ್ದುದನ್ನು ಕಂಡು ರವೀಂದ್ರ ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿ, ಜಾಗ ತಮ್ಮದೇ ಎಂದು ವಾಗ್ವಾದ ನಡೆಸಿ, ದೂರುದಾರರನ್ನು ತಳ್ಳಿದಲ್ಲದೆ ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ರವೀಂದ್ರ ಅವರ ತಲೆಗೆ ಕತ್ತಿ ತಾಗಿ ರಕ್ತಸ್ರಾವವಾಗುವಂತೆ ಗಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಲಾಟೆ ವೇಳೆ ಮತ್ತೋರ್ವ ಆರೋಪಿ ತಿಮ್ಮಪ್ಪ ತಿಪ್ಪ ನಾಯ್ಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮತ್ತೆ ಈ ಜಾಗದಲ್ಲಿ ದೋಣಿ ಇಟ್ಟರೆ ಕೊಲೆ ಮಾಡುವುದಾಗಿ ಅರವಿಂದ ನಾಯ್ಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.