ಬನವಾಸಿ: ಬನವಾಸಿ–ಸೊರಬಾ ರಸ್ತೆಯ ಯಡೂರಬೈಲ ವರದಾ ನದಿ ಸೇತುವೆ ಸಮೀಪ ಖಾಸಗಿ ಬಸ್ ಹಾಗೂ ಹಾಲಿನ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ನಲ್ಲಿದ್ದ ಪ್ರಯಾಣಿಕನೊಬ್ಬ ಗಾಯಗೊಂಡಿದ್ದು, ಇಬ್ಬರೂ ಚಾಲಕರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 7ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಶರತ್ ಮಹೇಶ್ವರ ದೀಕ್ಷಿತ್ ಅವರು ಕೆಎ-15/B-0539 ಸಂಖ್ಯೆಯ ಮಣಿಕಂಠ ಖಾಸಗಿ ಬಸ್ನಲ್ಲಿ ಬನವಾಸಿಯಿಂದ ಸೊರಬಾಕ್ಕೆ ಪ್ರಯಾಣಿಸುತ್ತಿದ್ದರು. ಯಡೂರಬೈಲ ವರದಾ ನದಿ ಸೇತುವೆ ಸಮೀಪ ತಿರುವಿನ ಬಳಿ ಎದುರಿನಿಂದ ಬಂದ ಕೆಎ-31/A-0519 ಸಂಖ್ಯೆಯ ಹಾಲಿನ ಪಿಕಪ್ ವಾಹನ ಬಸ್ ಗೆ ಡಿಕ್ಕಿ ಹೊಡೆದಿದೆ.
ಬಸ್ ಚಾಲಕ ಪಾಲಾಕ್ಷ ಹಾಗೂ ಪಿಕಪ್ ವಾಹನ ಚಾಲಕ ಮಂಜುನಾಥ ಯಲ್ಲಪ್ಪ ಹೀರೂರ ಇಬ್ಬರೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಶರತ್ ಅವರ ಬಲ ಭುಜಕ್ಕೆ ಒಳಪೆಟ್ಟಾಗಿದೆ.
ಗಾಯಾಳು ಮೊದಲು ಬನವಾಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.