ಐಆರ್ಬಿ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ನಿರ್ಲಕ್ಷ್ಯ ಮತ್ತೊಮ್ಮೆ ಪ್ರಶ್ನೆಗೆ ಗುರಿಯಾಗಿದೆ. ಕಾರವಾರದ ಬಿಣಗಾ ಸಮೀಪದ ಸೋಮನಾಥ ಐಟಿಐ ಕಾಲೇಜು ಬಳಿ ರಸ್ತೆ ಮಧ್ಯೆಯೇ ಹಾಕಲಾಗಿದ್ದ ಜಲ್ಲಿಕಲ್ಲಿನ ರಾಶಿಯ ಬಳಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.
ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಆರ್ಬಿ ಸಂಸ್ಥೆ ರಸ್ತೆ ಮಧ್ಯದಲ್ಲಿ ಜಲ್ಲಿಕಲ್ಲಿನ ರಾಶಿ ಹಾಕಿ, ಅದರ ಬಳಿ ಕೇವಲ ಕಂಬ ಮತ್ತು ಸಣ್ಣ ಸೂಚನಾ ಫಲಕ ಅಳವಡಿಸಿತ್ತು. ವೇಗವಾಗಿ ಬಂದ ಕಾರಿನ ಚಾಲಕ ಕೊನೆಯ ಕ್ಷಣದಲ್ಲಿ ಜಲ್ಲಿಕಲ್ಲಿನ ರಾಶಿಯನ್ನು ಗಮನಿಸಿ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನದ ಸಂಗತಿ.
ಸ್ಥಳೀಯರ ಆರೋಪದಂತೆ, ಈ ಮಾರ್ಗದಲ್ಲಿ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಅನೇಕ ಕಡೆ ಸಮರ್ಪಕ ಎಚ್ಚರಿಕೆ ಫಲಕಗಳೇ ಇಲ್ಲ. ಮಳೆಗಾಲದಲ್ಲಿ ದೂರದ ನೋಟ ಸರಿಯಾಗಿ ಕಾಣದಿರುವ ಕಾರಣ ಇಂತಹ ಅಡೆತಡೆಗಳು ಅಪಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಅಪಾಯ ಸೂಚಿಸುವ ಪ್ರತಿಫಲಕ ಬ್ಯಾರಿಕೇಡ್ಗಳು, ಎಚ್ಚರಿಕೆ ದೀಪಗಳು ಅಥವಾ ಸುರಕ್ಷತಾ ವ್ಯವಸ್ಥೆ ಕಲ್ಪಿಸುವ ಬದಲು ರಸ್ತೆ ಮಧ್ಯದಲ್ಲೇ ಜಲ್ಲಿಕಲ್ಲು ಮತ್ತು ಮಣ್ಣಿನ ರಾಶಿ ಹಾಕಿರುವುದು ಗಂಭೀರ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಂಡು, ಇಂತಹ ಅವಘಡಗಳು ಮರುಕಳಿಸದಂತೆ ಐಆರ್ಬಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.