15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವು ಗುರಿ
ಯಲ್ಲಾಪುರ: ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಧಾತ್ರಿ ಫೌಂಡೇಷನ್ ವತಿಯಿಂದ ಪಟ್ಟಿ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದು, ಅದರ ಅಂಗವಾಗಿ ಸವಣಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆನಗೋಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಗೋಳಿಗದ್ದೆ)ಯಲ್ಲಿ ವಿದ್ಯಾರ್ಥಿಗಳಿಗೆ ಪಟ್ಟಿ ವಿತರಿಸಲಾಯಿತು.
ಸವಣಗೇರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ಬಣ್ಣ ಉದ್ದಾಬೈಲ, ಸಮಾಜದಿಂದ ನಮಗೇನು ಸಿಗುತ್ತದೆ ಎಂದು ಯೋಚಿಸುವವರೇ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ, ಬಡತನದಿಂದಲೇ ಬೆಳೆದು ಬಂದ ಧಾತ್ರಿ ಫೌಂಡೇಷನ್ನ ಶ್ರೀನಿವಾಸ ಭಟ್ಟ ಅವರು ಈ ವರ್ಷ ತಾಲೂಕಿನ ಹಲವು ಶಾಲೆಗಳ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಟ್ಟಿ ವಿತರಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಪಟ್ಟಿ ನೀಡುತ್ತಿರುವ ಅವರ ಸಮಾಜಮುಖಿ ಕಾರ್ಯಕ್ಕೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಸಂಜೀವಕುಮಾರ್ ಹೊಸ್ಕೇರಿ, ಎಸ್ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ಶಿಕ್ಷಕರಾದ ಪೂರ್ಣಿಮಾ ನಾಯ್ಕ, ಮಾನ್ಯಾ ಆಚಾರಿ ಹಾಗೂ ಪಾಲಕರು ಉಪಸ್ಥಿತರಿದ್ದರು. ಮಾನ್ಯಾ ಆಚಾರಿ ಸ್ವಾಗತಿಸಿದರೆ, ಪೂರ್ಣಿಮಾ ನಾಯ್ಕ ವಂದಿಸಿದರು.
ಇದೇ ವೇಳೆ ಆನಗೋಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಗೋಳಿಗದ್ದೆ)ಯಲ್ಲೂ ಧಾತ್ರಿ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಪಟ್ಟಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಂಕರ ಹೆಗಡೆ, ಕೆ.ಟಿ. ಹೆಗಡೆ, ಗುರು ಭಟ್ಟ, ಸಿಆರ್ಪಿ ಚಂದ್ರಹಾಸ ನಾಯ್ಕ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪಾಲಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಧಾತ್ರಿ ಫೌಂಡೇಷನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಅವರ ಸಮಾಜಸೇವೆಯನ್ನು ಅಭಿನಂದಿಸಲಾಯಿತು.