ಮುಂಡಗೋಡ: ದುಡುಕಿನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಅಪಘಾತ ಎಸಗಿ ಪರಾರಿಯಾದ ಅಪರಿಚಿತ ಇಕೋ ವಾಹನ ಚಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ತಾಲೂಕಿನ ಕಾಳಗನಕೊಪ್ಪ ಗ್ರಾಮದ ಸುಭಾಷ್ ಸಹದೇವಪ್ಪ ತಳಕೇರಿ (48) ಎಂದು ಗುರುತಿಸಲಾಗಿದೆ.
ಜುಲೈ 1ರಂದು ರಾತ್ರಿ ಸುಮಾರು 9.43ಕ್ಕೆ ಮುಂಡಗೋಡದಿಂದ ಕಾಳಗನಕೊಪ್ಪ ಕಡೆಗೆ ಬರುತ್ತಿದ್ದ ಇಕೋ ವಾಹನವು ನಿಯಂತ್ರಣ ತಪ್ಪಿ, ಅರಣ್ಯ ಇಲಾಖೆಯ ಟಿಂಬರ್ ಡಿಪೋ ಸಮೀಪ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸುಭಾಷ್ ತಳಕೇರಿ ಅವರ ಬಲ ಕಾಲು ಹಾಗೂ ಬಲ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮೊದಲು ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ರಾತ್ರಿ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಇಕೋ ವಾಹನ ಚಾಲಕ ಗಾಯಾಳುವಿಗೆ ನೆರವು ನೀಡದೇ, ಆಸ್ಪತ್ರೆಗೆ ದಾಖಲಿಸದೇ ಹಾಗೂ ಪೊಲೀಸರಿಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ವಾಹನ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.