ಶಿರಸಿ: ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷರು ಹಾಗೂ ಸಾಮಾಜಿಕ ಚಿಂತಕರಾಗಿದ್ದ ರಮಾನಂದ ನಾಯಕರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯದ ಜೊತೆಗೆ ಸಾಮಾಜಿಕ ಹೋರಾಟದ ಬದುಕನ್ನು ಕಟ್ಟಿಕೊಂಡಿದ್ದ ರಮಾನಂದ ನಾಯಕರ ಜೀವನ ಆದರ್ಶಮಯವಾಗಿತ್ತು. ಕಳಂಕ ರಹಿತ ಸಾರ್ವಜನಿಕ ಜೀವನ ಹಾಗೂ ಜನಪರ ರಾಜಕೀಯ ಅವರ ವ್ಯಕ್ತಿತ್ವದ ವಿಶೇಷತೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಭೂಮಿ ಹಕ್ಕಿನ ಹೋರಾಟದಲ್ಲಿ ರಮಾನಂದ ನಾಯಕರು ಅರಣ್ಯವಾಸಿಗಳೊಂದಿಗೆ ಹೆಜ್ಜೆ ಹಾಕಿದ್ದು, ಸಂಘಟನೆ, ಹೋರಾಟ ಹಾಗೂ ಪಾದಯಾತ್ರೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ರವೀಂದ್ರ ನಾಯ್ಕ ಸ್ಮರಿಸಿದ್ದಾರೆ.
ಅರಣ್ಯವಾಸಿಗಳ ಹಕ್ಕಿಗಾಗಿ ನಡೆದ ಹೋರಾಟಗಳಲ್ಲಿ ಅವರ ಪಾತ್ರ ವಿಶೇಷವಾಗಿದ್ದು, ಹೋರಾಟಗಾರರೊಂದಿಗೆ ನಿಂತು ಧೈರ್ಯ ತುಂಬಿದ ನಾಯಕತ್ವವನ್ನು ಜಿಲ್ಲೆ ಸದಾ ನೆನಪಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ರಮಾನಂದ ನಾಯಕರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರವೀಂದ್ರ ನಾಯ್ಕ ಪ್ರಾರ್ಥಿಸಿದ್ದಾರೆ.