ಕಾರವಾರ: ಜೇತನಾ ಸರ್ವೇ ವರದಿ ಅನುಮತಿ ನೀಡಿರುವ ಕಡಲತೀರ ಹಾಗೂ ಜಲ ಪ್ರದೇಶಗಳಲ್ಲಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೇತನಾ ಸರ್ವೇ ವರದಿ ಪ್ರಕಾರ ಜಿಲ್ಲೆಯ ನದಿಭಾಗ್, ಕಾಗಾಲ್ (ಬಾಡ), ಕುಮಟಾ ಹೆಡ್ ಬಂದರು, ಧಾರೇಶ್ವರ (ರಾಮನಗಿಂಡಿ), ಅಪ್ಸರಕೊಂಡ, ಕಾಸರಗೋಡು ಹಾಗೂ ಹೊನ್ನಾವರ ಅರೆಸಾಮಿ ಕೆರೆ ಪ್ರದೇಶಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಪ್ರದೇಶಕ್ಕೆ ಸೂಕ್ತವಾದ ಜಲಸಾಹಸ ಕ್ರೀಡೆಗಳನ್ನು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕಾಸರಕೋಡು ಕಡಲತೀರದಲ್ಲಿ ಶಬ್ದಮಾಲಿನ್ಯ ಉಂಟುಮಾಡದ ಇವಿ (EV) ಹಾಗೂ ಸೋಲಾರ್ ಚಾಲಿತ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದರು.
ಕಾಸರಕೋಡು ಕಡಲತೀರದಲ್ಲಿ ಸುಸಜ್ಜಿತ ವಾಚ್ ಟವರ್ ನಿರ್ಮಿಸುವಂತೆ ಹಾಗೂ ಕಡಲತೀರದ ಸಮೀಪ ಅರಣ್ಯ ಇಲಾಖೆ ನಿರ್ಮಿಸಿರುವ ಇಕೋ ಪಾರ್ಕ್ನ್ನು ನಿರ್ವಹಣೆ ಮತ್ತು ಆದಾಯ ಹಂಚಿಕೆ ಆಧಾರದ ಮೇಲೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಕುರಿತು ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.
ಗೋಕರ್ಣ ಮತ್ತು ಮುರುಡೇಶ್ವರದಲ್ಲಿ ಈಗಾಗಲೇ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವ ಸಂಸ್ಥೆಗಳು ಪ್ರವಾಸಿಗರ ಆಕರ್ಷಣೆಗಾಗಿ ಹೆಚ್ಚುವರಿ ಚಟುವಟಿಕೆಗಳಿಗೆ ಅನುಮತಿ ಕೋರಿರುವ ಬಗ್ಗೆ, ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಯಿಂದ ಅಗತ್ಯ ಮಾರ್ಗಸೂಚಿ ಪಡೆದು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಂಗಳಗೌರಿ ಭಟ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.