ಕಾರವಾರ: ಮಗನಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಆತಂಕಗೊಂಡಿದ್ದ ತಾಯಿ ಮನೆಯ ಮೇಲ್ಛಾವಣಿಯ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದ ಶಿರವಾಡದ ಬಂಗಾರಪ್ಪನಗರದಲ್ಲಿ ನಡೆದಿದೆ.
ಮೃತರನ್ನು ವಿಜಯಾ ಕೋಂ ವೆಂಕಟೇಶ ವಡ್ಡರ (36) ಎಂದು ಗುರುತಿಸಲಾಗಿದೆ. ಈ ಕುರಿತು ಮೃತರ ತಾಯಿ ರತ್ನಾ ಕೋಂ ಈರಮಾಳ ರೆಡ್ಡಿ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯಾ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಂಗಾರಪ್ಪನಗರದಲ್ಲಿ ವಾಸವಾಗಿದ್ದರು. ಅವರ 10 ವರ್ಷದ ಮಗ ಶರತ್ ಸುಮಾರು ಒಂದೂವರೆ ತಿಂಗಳ ಹಿಂದೆ ಬೈಕ್ನಲ್ಲಿ ಹಿಂಬದಿ ಕುಳಿತು ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.
ಚಿಕಿತ್ಸೆ ವೇಳೆ ಆತನ ತಲೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತಲೆಯ ಸಣ್ಣ ಮೂಳೆಯನ್ನು ತೆಗೆದುಹಾಕಲಾಗಿದೆ. 18 ವರ್ಷವಾದ ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದರು.
ಮಗನ ಆರೋಗ್ಯದ ವಿಚಾರವನ್ನು ವಿಜಯಾ ಅವರು ಮನಸ್ಸಿಗೆ ಹಚ್ಚಿಕೊಂಡು ಚಿಂತಿತರಾಗಿದ್ದರು. ಈ ಕುರಿತು ಪತಿಯೊಂದಿಗೆ ಹಲವು ಬಾರಿ ಜಗಳವೂ ಆಗುತ್ತಿತ್ತು. ಕುಟುಂಬದವರು ಕೂಡ ಅವರಿಗೆ ಸಮಾಧಾನ ಹೇಳಿ ಧೈರ್ಯ ತುಂಬಲು ಪ್ರಯತ್ನಿಸಿದ್ದರು.
ಆದರೂ ಮಗನ ಆರೋಗ್ಯದ ವಿಚಾರದಿಂದ ಮನನೊಂದಿದ್ದ ವಿಜಯಾ ಅವರು ಆ.9ರಂದು ರಾತ್ರಿ 10.45ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮೇಲ್ಛಾವಣಿಯ ಪಕಾಸಿಗೆ ನೇಣು ಬಿಗಿದುಕೊಂಡಿದ್ದಾರೆ. ತಕ್ಷಣವೇ ಅವರನ್ನು ಕೆಳಗಿಳಿಸಿ, ಪತಿ ಹಾಗೂ ಕುಟುಂಬದವರು ಕಾರವಾರ ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಪತ್ನಿಯ ಸಾವಿನ ಸುದ್ದಿ ತಿಳಿದ ಬಳಿಕ ‘ತಾನೂ ಸಾಯುತ್ತೇನೆ’ ಎಂದು ಹೇಳಿ ಆಕೆಯ ಪತಿ ವೆಂಕಟೇಶ ಆಸ್ಪತ್ರೆಯಿಂದ ಹೊರಟು ಹೋಗಿದ್ದು, ಅವರನ್ನು ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ ಬಳಿಕ ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಎಲ್ಲಾ ಕಷ್ಟಕ್ಕೂ ಆತ್ಮಹತ್ಯೆಯೊಂದೇ ದಾರಿಯಲ್ಲ.