ಕಾರವಾರ: ಕಾರವಾರದ ಕೋಡಿಬಾಗದ ಪಂಚರೇಶಿವಾಡದಲ್ಲಿ 43 ವರ್ಷದ ಟ್ಯಾಕ್ಸಿ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಪಂಚರೇಶಿವಾಡದ ಮಾರಿಂಗಿಣಿ ದೇವಸ್ಥಾನದ ಹಿಂಭಾಗದ ನಿವಾಸಿ ಸತೀಶ ಶ್ರೀಧರ ನಂಬಿಯಾರ ಎಂದು ಗುರುತಿಸಲಾಗಿದೆ.
ಮೃತರ ಪತ್ನಿ ಸಾತೀಕಾ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸತೀಶ ಅವರು ಸುಮಾರು 20 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅವರು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸಾಮಾನ್ಯವಾಗಿ ಅಪರೂಪಕ್ಕೆ ಮದ್ಯ ಸೇವಿಸುತ್ತಿದ್ದ ಸತೀಶ ಅವರು ಕಳೆದ ಎರಡು-ಮೂರು ದಿನಗಳಿಂದ ಮಂಕಾಗಿದ್ದರೆನ್ನಲಾಗಿದೆ. ಮದ್ಯ ಸೇವಿಸಿ ತಡರಾತ್ರಿ ಮನೆಗೆ ಬರುತ್ತಿದ್ದ ಅವರು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ.21ರಂದು ರಾತ್ರಿ ಸುಮಾರು 8 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಹೇಳಿ ಸತೀಶ ತೆರಳಿದ್ದರು. ಆದರೆ ತಡರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಆ.22ರಂದು ಬೆಳಗಿನ ಜಾವ ಸುಮಾರು 5.30ಕ್ಕೆ ಪಂಚರೇಶಿವಾಡದಲ್ಲಿರುವ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಮುಂಭಾಗದ ಸರ್ವಿಸ್ ರಸ್ತೆಯ ಪಕ್ಕದಲ್ಲಿದ್ದ ಆಕೇಶಿಯಾ ಮರಕ್ಕೆ ಹಗ್ಗದಿಂದ ನೇ_ಣು ಬಿಗಿದುಕೊಂಡ ಸ್ಥಿತಿಯಲ್ಲಿ ಸತೀಶ ಅವರ ಮೃತದೇಹ ಪತ್ತೆಯಾಗಿದೆ.
ಮೃತರ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.