ಕಾರವಾರ: ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದ್ಯೋಗಿಯೊಬ್ಬರಿಗೆ ತುರ್ತಾಗಿ ಐದು ಯೂನಿಟ್ ರಕ್ತದ ಅಗತ್ಯವಿದ್ದ ಸಂದರ್ಭದಲ್ಲಿ, ಕಾರವಾರದ ಐವರು ಯುವಕರು ಮಂಗಳೂರಿಗೆ ತೆರಳಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸುಭಾಷ್ ಎಂ. ನಾಯ್ಕ (ಬಿಣಗಾ), ವಿನಾಯಕ ನಾಯ್ಕ (ಚೆಂಡಿಯಾ), ಮಹೇಶ್ ನಾಯ್ಕ (ಹಣಕೋಣ), ನಾಗರಾಜ ಚಿನ್ನಕರ (ತೋಡೂರು) ಹಾಗೂ ಕರುಣಾಕರ ತಳೇಕರ್ (ಚೆಂಡಿಯಾ) ಅವರು ಆಸ್ಪತ್ರೆಗೆ ತೆರಳಿ ಸಕಾಲದಲ್ಲಿ ರಕ್ತದಾನ ಮಾಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬ್ಲಡ್ ಡೋನರ್ಸ್ ಕಾರವಾರ ತಂಡದ ಸಂಸ್ಥಾಪಕ ವಿನಾಯಕ ನಾಯ್ಕ, ಕಾರವಾರ-ಅಂಕೋಲಾ ಭಾಗದ ಅನೇಕ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯ ಉಂಟಾದರೆ, ರೋಗಿಯ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಬಂಧುಗಳೇ ಮುಂದೆ ಬಂದು ರಕ್ತದಾನ ಮಾಡಿದರೆ ಸಮಯಕ್ಕೆ ನೆರವಾಗುತ್ತದೆ.
ರಕ್ತಕ್ಕಾಗಿ ಅಲೆದಾಡುವ ಪರಿಸ್ಥಿತಿ ತಪ್ಪುತ್ತದೆ. ಈ ರೀತಿಯ ಸಹಕಾರ ಎಲ್ಲರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಈ ವಿಷಯವನ್ನು ಹಂಚಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ರಕ್ತದಾನವೇ ಜೀವದಾನವಾಗಿದ್ದು, ಸಮಾಜದಲ್ಲಿ ಇಂತಹ ಮಾನವೀಯ ಕಾರ್ಯಗಳು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.