ಕುಮಟಾ: ಹರೇ ಕೃಷ್ಣ ಸತ್ಸಂಗ, ಕುಮಟಾ (ಭಕ್ತಿ ಯೋಗ ಕೇಂದ್ರ) ವತಿಯಿಂದ Align Values Foundation ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹಾಮಹೋತ್ಸವವನ್ನು ನೆಲ್ಲಿಕೇರಿಯ ಮಹಾಸತಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಶ್ರೀಕೃಷ್ಣನ ಭಕ್ತಿಸಂದೇಶ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಿದ್ದ ಮಹೋತ್ಸವದಲ್ಲಿ 600ಕ್ಕೂ ಹೆಚ್ಚು ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಶ್ರೀಕೃಷ್ಣನ ದರ್ಶನ ಪಡೆದು ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಶ್ರೀಮಾನ್ ಗೌರ ಹರೀ ಪ್ರಭುಜಿ ಅವರು ವಿಶೇಷ ಪ್ರವಚನ ನೀಡಿದರು. ಶ್ರೀಕೃಷ್ಣನ ಜೀವನ, ಭಗವದ್ಗೀತೆಯ ಉಪದೇಶಗಳು ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಸರಳವಾಗಿ ವಿವರಿಸಿದ ಅವರ ಪ್ರವಚನ ಭಕ್ತರ ಗಮನ ಸೆಳೆಯಿತು.
ಮಹೋತ್ಸವದ ಅಂಗವಾಗಿ ಹರಿನಾಮ ಸಂಕೀರ್ತನ, ಕೀರ್ತನೆ, ಶ್ರೀಕೃಷ್ಣನ ಅಭಿಷೇಕ, ಆರತಿ ಹಾಗೂ ಮಹಾಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಭಕ್ತರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಮಕ್ಕಳಲ್ಲಿ ಶ್ರೀಕೃಷ್ಣನ ಬಗ್ಗೆ ಆಸಕ್ತಿ ಹಾಗೂ ಭಕ್ತಿಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ‘ಮುದ್ದು ಕೃಷ್ಣ–ಮುದ್ದು ರಾಧೆ’ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಕೃಷ್ಣ ಹಾಗೂ ರಾಧೆಯ ವೇಷಭೂಷಣದಲ್ಲಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು.
ಸಿದ್ದಾಪುರ, ಹೊನ್ನಾವರ, ಭಟ್ಕಳ, ಬೈಂದೂರು, ಮರವಂತೆ, ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಮಹೋತ್ಸವದಲ್ಲಿ ಪಾಲ್ಗೊಂಡರು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಶ್ರೀಕೃಷ್ಣನ ದರ್ಶನ, ಕೀರ್ತನೆ, ಅಭಿಷೇಕ, ಆರತಿ ಹಾಗೂ ಮಹಾಪ್ರಸಾದದಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಅನುಭೂತಿ ಪಡೆದರು.
ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಭಕ್ತರು, ಸ್ವಯಂಸೇವಕರು, ದಾನಿಗಳು, ಹಿತೈಷಿಗಳು ಹಾಗೂ ವಿವಿಧೆಡೆಯಿಂದ ಆಗಮಿಸಿದ ಭಕ್ತರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿಯೂ ಭಕ್ತಿ, ಆಧ್ಯಾತ್ಮಿಕತೆ ಹಾಗೂ ಸತ್ಸಂಗದ ಸಂದೇಶವನ್ನು ಹೆಚ್ಚಿನ ಜನರಿಗೆ ತಲುಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.