ಸೆ.11ರಿಂದ ಮೂರು ದಿನ ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳ ಆಯೋಜನೆ
ಯಲ್ಲಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಯಲ್ಲಾಪುರ ಪಟ್ಟಣದಲ್ಲಿ ಮೂರು ದಿನಗಳ ಕಾಲ ಸ್ವದೇಶಿ ವಸ್ತುಗಳ ಮಾರಾಟ ಮೇಳ ಹಾಗೂ ಬೃಹತ್ ಆಹಾರ ಮೇಳ ಆಯೋಜಿಸಲಾಗಿದೆ. ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಸೆ.11ರಿಂದ ಸೆ.13ರವರೆಗೆ ನಡೆಯಲಿರುವ ಈ ಮೇಳದಲ್ಲಿ ವಿವಿಧ ಬಗೆಯ ಸ್ವದೇಶಿ ಉತ್ಪನ್ನಗಳು, ನಿತ್ಯಬಳಕೆಯ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ವಿಶೇಷ ವಸ್ತುಗಳು ಒಂದೇ ವೇದಿಕೆಯಲ್ಲಿ ಲಭ್ಯವಾಗಲಿವೆ.
ಶಿವಮೊಗ್ಗದ ಗಜಮುಖ ಇವೆಂಟ್ಸ್ ವತಿಯಿಂದ ಆಯೋಜಿಸಿರುವ ಮೇಳದಲ್ಲಿ ಮನೆ ಬಳಕೆಯ ವಸ್ತುಗಳಿಂದ ಹಿಡಿದು ಅಲಂಕಾರಿಕ ಸಾಮಗ್ರಿಗಳು, ಹೋಂ ಮೇಡ್ ಉತ್ಪನ್ನಗಳು, ಆಯುರ್ವೇದ ಉತ್ಪನ್ನಗಳು ಹಾಗೂ ಖಾದಿ ವಸ್ತುಗಳವರೆಗೆ ಹಲವು ಬಗೆಯ ದೇಶೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವವರಿಗೆ ಒಂದೇ ಸ್ಥಳದಲ್ಲಿ ಹಲವು ಆಯ್ಕೆಗಳನ್ನು ಒದಗಿಸುವುದು ಈ ಮೇಳದ ವಿಶೇಷತೆಯಾಗಿದೆ.
ಮೇಳಕ್ಕೆ ಬರುವ ಆಹಾರ ಪ್ರಿಯರಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ದೋಸೆ, ವಡೆ, ಜಿಲೇಬಿ, ಹೋಳಿಗೆ, ಚಕ್ಕುಲಿ, ಕರ್ಜಿಕಾಯಿ ಸೇರಿದಂತೆ ವಿವಿಧ ಬಗೆಯ ದೇಶೀಯ ಆಹಾರ ಪದಾರ್ಥಗಳ ಬೃಹತ್ ಆಹಾರ ಮೇಳವೂ ಇಲ್ಲಿ ನಡೆಯಲಿದೆ. ಇದರ ಜೊತೆಗೆ ವಿವಿಧ ಬಗೆಯ ನರ್ಸರಿ ಗಿಡಗಳ ಮಾರಾಟವೂ ಇರಲಿದ್ದು, ಮನೆ ಹಾಗೂ ತೋಟದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಮೇಳದಲ್ಲಿ ಆಯ್ಕೆಗಳಿವೆ.
ಸೆ.11ರಂದು ಸಂಜೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ ಅವರು ಮೇಳಕ್ಕೆ ಚಾಲನೆ ನೀಡಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಗೌರಿ ಗಣೇಶ ಹಬ್ಬದ ಖರೀದಿ, ಮನೆಯ ಅಗತ್ಯ ವಸ್ತುಗಳ ಆಯ್ಕೆ, ದೇಶೀಯ ಉತ್ಪನ್ನಗಳ ಪರಿಚಯ ಹಾಗೂ ವಿವಿಧ ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶಗಳನ್ನು ಒಂದೇ ಸ್ಥಳದಲ್ಲಿ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರಾದ ರಮೇಶ ಎನ್.ಶಿವಮೊಗ್ಗ ಮನವಿ ಮಾಡಿದ್ದಾರೆ.
ಮತ್ತೇಕೆ ತಡ, ಬನ್ನಿ ಸ್ವದೇಶಿ ಮೇಳಕ್ಕೆ! ಹಬ್ಬದ ಸಂಭ್ರಮ ಇಮ್ಮಡಿಯಾಗಲಿ!