ಜೋಯಿಡಾ: ಜಮೀನು ಗಡಿ ವಿವಾದದ ಹಿನ್ನೆಲೆ ಗುಂಪೊಂದು ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಬೇಲಿ ಮುರಿದು ಹಾನಿ ಮಾಡಿದ್ದು, ಬೆದರಿಕೆ ಹಾಕಿದೆ ಎಂದು ಆರೋಪಿಸಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನುಮಾನಗಲ್ಲಿಯ ನಿವಾಸಿ ಹಾಗೂ ರೈತರಾದ ನಾಗೇಶ ಪಾಂಡುರಂಗ ದೇಸಾಯಿ (64) ನೀಡಿದ ದೂರಿನ ಮೇರೆಗೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೂಪಾ ಪುನರ್ವಸತಿ ಯೋಜನೆಯಡಿ ದೇಸಾಯಿ ಅವರಿಗೆ ದೊರೆತ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ಭತ್ತದ ಕೃಷಿ ಮಾಡುತ್ತಾ ಬಂದಿದ್ದಾರೆ. ಆದರೆ ಪಕ್ಕದ ಜಮೀನಿನವರೊಂದಿಗೆ ಗಡಿ ವಿವಾದ ಉಂಟಾಗಿದ್ದು, ಶಿವಾಜಿ ಗೋಸಾವಿ ಅವರು ಈ ಹಿಂದೆ ಸುಮಾರು 100×30 ಮೀಟರ್ ಜಾಗವನ್ನು ಕಬಳಿಸಿ ಬೇಲಿ ತೆರವುಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಸರ್ಕಾರಿ ಸರ್ವೇ ನಡೆಸುವಂತೆ ಅರ್ಜಿ ಸಲ್ಲಿಸಲಾಗಿದ್ದು, ವಿವಾದ ಇತ್ಯರ್ಥವಾಗುವ ಮೊದಲೇ ಜೂನ್ 20ರಂದು ಸಂಜೆ ಆರೋಪಿಗಳು ಗುಂಪಾಗಿ ಜಮೀನಿಗೆ ನುಗ್ಗಿ ಉಳಿದ ಬೇಲಿಯನ್ನೂ ಮುರಿದು ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಅಕ್ಷಯ ಗೋಸಾವಿ ಹಾಗೂ ರಮೇಶ್ ಗೋಸಾವಿ ಅವರು ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯಿಂದ ಜಮೀನಿನಲ್ಲಿ ಕೃಷಿ ಕಾರ್ಯ ನಡೆಸಲು ಹಾಗೂ ದಿನನಿತ್ಯದ ಕೆಲಸಗಳಿಗೆ ತೆರಳಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ದೂರುದಾರರು ಉಲ್ಲೇಖಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.