ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ; ಜೀವ ಬೆದರಿಕೆ ಆರೋಪ
ಹೊನ್ನಾವರ: ಇಡಗುಂಜಿ ದೇವಸ್ಥಾನಕ್ಕೆ ತೆರಳಲು ಮನೆಯಿಂದ ಹೊರಟಿದ್ದ ವ್ಯಕ್ತಿಯ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಳ್ಕೋಡ, ಹುಡ್ಕಣಿ ನಿವಾಸಿ ಶ್ರೀಧರ ಬೀರಪ್ಪ ಅಂಬಿಗ (48) ನೀಡಿದ ದೂರಿನ ಮೇರೆಗೆ, ಮುಳ್ಕೋಡ ತಲಮೂಟೆ ನಿವಾಸಿ ಮಾಬ್ಲೇಶ್ವರ ಶ್ರೀಧರ ನಾಯ್ಕ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿಯು ಕಳೆದ ಎರಡು ವರ್ಷಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದು, ದಾರಿಯಲ್ಲಿ ಸಿಕ್ಕಾಗಲೆಲ್ಲ ಹಿಂಬಾಲಿಸುತ್ತಿದ್ದ. ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ವರ್ತನೆ ಬದಲಾಗಿರಲಿಲ್ಲ.
ಜುಲೈ 18ರಂದು ಬೆಳಿಗ್ಗೆ ಸುಮಾರು 11.30ಕ್ಕೆ ಶ್ರೀಧರ ಅವರು ಇಡಗುಂಜಿ ದೇವಸ್ಥಾನಕ್ಕೆ ತೆರಳಲು ಮೋಳ್ಕೋಡ ಬಳಗಾರ್ತಿಕೇರಿ ಬಳಿ ನಿಲ್ಲಿಸಿದ್ದ ತಮ್ಮ ಸ್ಕೂಟಿ ತೆಗೆದುಕೊಳ್ಳಲು ಬಂದಿದ್ದ ವೇಳೆ, ಆರೋಪಿಯು ಪಲ್ಸರ್ ಬೈಕ್ನಲ್ಲಿ ಅಲ್ಲಿಗೆ ಬಂದಿದ್ದಾನೆ. “ಎಲ್ಲಿಗೆ ಹೋಗುತ್ತಿದ್ದೀಯ?” ಎಂದು ಪ್ರಶ್ನಿಸಿದ್ದು, ಅದಕ್ಕೆ “ನೀನು ಯಾರು ಕೇಳಲು?” ಎಂದು ಉತ್ತರಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಆರೋಪಿಯು ತಲೆಗೆ ಹೊಡೆದು, ತಳ್ಳಿದಲ್ಲದೆ ಶರ್ಟ್ ಹಿಡಿದು ಎಳೆದು ಹರಿದು ಹಾಕಿ ನೆಲಕ್ಕೆ ಬೀಳಿಸಿ, ಎದೆ ಹಾಗೂ ಕಾಲಿನ ಮೇಲೆ ತುಳಿದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸ್ಥಳಕ್ಕೆ ಸಾಕ್ಷಿದಾರರು ಬರುತ್ತಿರುವುದನ್ನು ಗಮನಿಸಿದ ಆರೋಪಿಯು, “ಇವತ್ತು ಸಂಜೆ ಒಳಗೆ ನಿನ್ನನ್ನು ತೆಗೆಯುತ್ತೇನೆ” ಎಂದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.