ಶಾಸಕ ಮಂಕಾಳ ವೈದ್ಯ ವಿರುದ್ಧ ಬಿಜೆಪಿ ಮುಖಂಡ ಮಾಸ್ತಪ್ಪ ನಾಯ್ಕ ವಾಗ್ದಾಳಿ
ಭಟ್ಕಳ: ತಾಲೂಕಿನ ಗೊರಟೆ ಭಾಗದ ಮೀನುಗಾರರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಮೂರು ವರ್ಷಗಳಿಂದ ಭರವಸೆ ನೀಡಿದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಬಿಜೆಪಿ ಮುಖಂಡ ಮಾಸ್ತಪ್ಪ ನಾಯ್ಕ ಮಾಜಿ ಸಚಿವ ಮಂಕಾಳ ವೈದ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೊರಟೆ ಭಾಗದ ಮೀನುಗಾರರ ಅನುಕೂಲಕ್ಕಾಗಿ ಎರಡು ಸೌರ ದೀಪಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಮೀನುಗಾರರ ಸಮಸ್ಯೆಗಳನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಚಿವ ಸಂಪುಟ ವಿಸ್ತರಣೆ ಮುಗಿದಿದೆ. ಈಗಲಾದರೂ ಬೆಂಗಳೂರಿನ ರಾಜಕೀಯದಿಂದ ಹೊರಬಂದು ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ. ಮೀನುಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಭರವಸೆಗಳನ್ನಷ್ಟೇ ನೀಡಿದ್ದೀರಿ. ಆದರೆ, ಮೀನುಗಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದೀರಿ ಎಂದು ಅವರು ಟೀಕಿಸಿದರು.
ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ವೆಂಕಟಾಪುರ ಭಾಗದ ರೆಸಾರ್ಟ್ ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಗೊರಟೆ ಸೇರಿದಂತೆ ಹಲವು ಪ್ರದೇಶಗಳ ಜನರ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿವೆ ಎಂದು ಆರೋಪಿಸಿದರು.
ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿರುವುದನ್ನು ಉಲ್ಲೇಖಿಸಿದ ಅವರು, ಟೈಪಿಂಗ್ ತಪ್ಪಿನಿಂದ ಹೆಸರು ಕೈಬಿಟ್ಟಿಲ್ಲ, ಬೇರೆ ಕಾರಣಗಳಿಂದ ಅವಕಾಶ ಸಿಕ್ಕಿಲ್ಲ. ಈಗಲಾದರೂ ಉಳಿದ ಅವಧಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿ ಎಂದು ಮಾಸ್ತಪ್ಪ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಮೊಗೇರ, ಸುಬ್ರಾಯ ಮೊಗೇರ, ನಾಗೇಶ್ ಮೊಗೇರ, ನಾಗೇಂದ್ರ ಮೊಗೇರ, ಸಿರಿ ಮೊಗೇರ, ರಾದ ಕಾರ್ವಿ, ಈಶ್ವರ್ ಮೊಗೇರ, ಶ್ರೀಧರ್ ಮೊಗೇರ, ಮಾಸ್ತಿ ಮೊಗೇರ, ತಿಮ್ಮಪ್ಪ ಮೊಗೇರ, ವೆಂಕಟರಮಣ ಮೊಗೇರ, ಕುಮಾರ್ ಮೊಗೇರ ಮುಂತಾದವರು ಉಪಸ್ಥಿತರಿದ್ದರು.