ಮುಂಡಗೋಡ: ಸ್ಕೂಟಿ ಒಳಗೆ ಬೃಹತ್ ಗಾತ್ರದ ನಾಗರಹಾವು ಸೇರಿಕೊಂಡು ಹೊರಬರಲಾಗದೆ ಸಿಲುಕಿದ ಘಟನೆ ಮುಂಡಗೋಡ ತಾಲೂಕಿನ ಕಾತೂರ ವಲಯದ ರಾಮಾಪುರ ಶಾಖೆಯ ಅಟ್ಟಬೈಲ್ನಲ್ಲಿ ನಡೆದಿದೆ.
ಅಟ್ಟಬೈಲ್ ನಿವಾಸಿ ನಿರಂಜನ್ ಜೈನ ಅವರು ಈ ಕುರಿತು ದೂರವಾಣಿ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆತ ತಕ್ಷಣ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಸ್ಥಳಕ್ಕೆ ಆಗಮಿಸಿ, ಸ್ಕೂಟಿ ಒಳಗೆ ಸೇರಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದರು.
ಬೃಹತ್ ಗಾತ್ರದ ನಾಗರಹಾವನ್ನು ರಕ್ಷಣೆ ಮಾಡಿದ ಬಳಿಕ, ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಮೀಪದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ಮಂಜುನಾಥ್ ಸುಬ್ಬಣ್ಣವರ್, ಅರಣ್ಯ ವೀಕ್ಷಕರಾದ ತನ್ಮಯ ನಾಯ್ಕ್ ಹಾಗೂ ಜೀವನ್ ನಾಯ್ಕ್ ಭಾಗವಹಿಸಿದ್ದರು. ಸ್ಥಳೀಯರಾದ ನಿರಂಜನ್ ಜೈನ, ನಾಗರಾಜ್ ನಾಯ್ಕ್ ಹಾಗೂ ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು.
ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ಹಾಗೂ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ವಾಹನಗಳು, ಮನೆಗಳ ಸುತ್ತಮುತ್ತ ಸೇರಿದಂತೆ ವಿವಿಧೆಡೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ದೀರ್ಘಕಾಲ ನಿಲ್ಲಿಸಿದ್ದ ಸ್ಕೂಟಿ, ಬೈಕ್ ಅಥವಾ ಕಾರುಗಳನ್ನು ಚಾಲನೆ ಮಾಡುವ ಮುನ್ನ ಒಮ್ಮೆ ಪರಿಶೀಲಿಸುವುದು ಸುರಕ್ಷಿತ.
ಹಾವನ್ನು ಕಂಡರೆ ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಮತ್ತು ಜಾಗ್ರತೆ ಅಗತ್ಯ. ಹಾವುಗಳನ್ನು ಸ್ವತಃ ಹಿಡಿಯಲು ಪ್ರಯತ್ನಿಸದೆ ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಹಾವು ರಕ್ಷಕರಿಗೆ ಮಾಹಿತಿ ನೀಡುವುದು ಸೂಕ್ತ ಎಂದು ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಜಾಗೃತಿ ಮೂಡಿಸಿದರು.