ಮುಂಡಗೋಡ: ಮುಂಡಗೋಡದಲ್ಲಿ ಅನಧಿಕೃತ ಹಣಕಾಸು ವ್ಯವಹಾರ ನಡೆಯುತ್ತಿದೆ ಎಂಬ ಸುಳಿವಿನ ಬೆನ್ನತ್ತಿದ ಪೊಲೀಸರು ನಡೆಸಿದ ದಾಳಿಯಲ್ಲಿ ಪತ್ತೆಯಾದ ದಾಖಲೆಗಳು ಇದೀಗ ಕ್ರಿಮಿನಲ್ ಪ್ರಕರಣಕ್ಕೆ ಕಾರಣವಾಗಿವೆ. ಸುಮಾರು ಒಂದು ತಿಂಗಳ ಪರಿಶೀಲನೆಯ ಬಳಿಕ ಸಹಕಾರಿ ಇಲಾಖೆ ನೀಡಿದ ವರದಿಯ ಆಧಾರದ ಮೇಲೆ ಮುಂಡಗೋಡ ನಿವಾಸಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಮುಂಡಗೋಡ ಬೃಂದಾವನ ಲೇಔಟ್ನ ನಿವಾಸಿ ತೌಸಿಫ್ ಅಹಮ್ಮದ್ ಮಹಬೂಬಸಾಬ ಪಣಿಬಂದ ಎಂದು ಗುರುತಿಸಲಾಗಿದೆ.
ತಾಲೂಕಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ವಿಶೇಷ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು. ಅದರಂತೆ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಹಾವೀರ ಕಾಂಬ್ಳೆ ನೇತೃತ್ವದಲ್ಲಿ, ಮುಂಡಗೋಡ ಜೆಎಂಎಫ್ಸಿ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಜೂನ್ 24ರಂದು ಬೆಳಿಗ್ಗೆ 8 ಗಂಟೆಗೆ ಆರೋಪಿಯ ಮನೆ ಮೇಲೆ ದಾಳಿ ನಡೆಸಲಾಯಿತು.
ದಾಳಿಯ ವೇಳೆ ನಗದು ಹಣ ಸಿಕ್ಕಿರಲಿಲ್ಲ. ಆದರೆ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಹಲವು ದಾಖಲೆಗಳು, ಲೆಕ್ಕಪತ್ರಗಳು ಹಾಗೂ ದಾಖಲಾತಿಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ದಾಖಲೆಗಳನ್ನು ಮರುದಿನವೇ ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಪರಿಶೀಲನೆಗಾಗಿ ಕಳುಹಿಸಲಾಯಿತು.
ದಾಖಲೆಗಳನ್ನು ಪರಿಶೀಲಿಸಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ರಾಮನಗೌಡ ಪಾಟೀಲ, ಆರೋಪಿಯು ಅಗತ್ಯ ಪರವಾನಗಿ ಇಲ್ಲದೆ ಹಣಕಾಸು ವ್ಯವಹಾರ ನಡೆಸಿ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ವರದಿ ಸಲ್ಲಿಸಿ ದೂರು ದಾಖಲಿಸಿದರು.
ದಾಳಿಯಲ್ಲಿ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಆರೋಪಿಯ ಹಣಕಾಸು ವ್ಯವಹಾರಗಳ ವ್ಯಾಪ್ತಿ, ಎಷ್ಟು ಮಂದಿಗೆ ಸಾಲ ನೀಡಲಾಗಿದೆ, ಎಷ್ಟು ಮೊತ್ತ ವಹಿವಾಟಾಗಿದೆ ಹಾಗೂ ಈ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರೆದಿದೆ.