ಮುರುಡೇಶ್ವರ: ಕಳೆದ ಶನಿವಾರ ತಡರಾತ್ರಿ ನಡೆದ ಚೂರಿ ಇರಿತ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಮುರುಡೇಶ್ವರ ಪೊಲೀಸರು, ಪರಾರಿಯಾಗಿದ್ದ ಪ್ರಮುಖ ಆರೋಪಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಐವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊನೆಯ ಆರೋಪಿಯಾಗಿದ್ದ ದರ್ಶನ್ ನಾಯ್ಕನ ಬಂಧನದೊಂದಿಗೆ ಪ್ರಕರಣದ ಎಲ್ಲ ಆರೋಪಿಗಳೂ ಇದೀಗ ಪೊಲೀಸರ ವಶಕ್ಕೆ ಸಿಕ್ಕಂತಾಗಿದೆ.
ಘಟನೆ ಬಳಿಕ ಆರೋಪಿಗಳು ಪೊಲೀಸರ ಕೈಗೆ ಸಿಗದೆ ವಿವಿಧೆಡೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಅವರ ಚಲನವಲನಗಳ ಮೇಲೆ ಪೊಲೀಸರು ನಿರಂತರ ನಿಗಾ ಇರಿಸಿದ್ದರು. ಆರೋಪಿಗಳ ಪತ್ತೆಗಾಗಿ ತನಿಖಾ ತಂಡಗಳು ಶಿವಮೊಗ್ಗ, ದಾವಣಗೆರೆ, ಬೈಂದೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾಹಿತಿ ಕಲೆಹಾಕಿ ಶೋಧ ಕಾರ್ಯ ನಡೆಸಿದ್ದವು.
ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ರಾಜು ನಾಯ್ಕ ಬೈಂದೂರು ಭಾಗದಲ್ಲಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಮಂಗಳವಾರ ಬೆಳಗ್ಗೆ ಬೈಂದೂರಿನ ಗುಳ್ಳಿ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜು ನಾಯ್ಕನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಚೂರಿ ಇರಿತಕ್ಕೆ ಕಾರಣ, ಆರೋಪಿಗಳ ನಡುವಿನ ಸಂಬಂಧ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳೆಲ್ಲರೂ ಬಂಧನಕ್ಕೊಳಗಾಗಿರುವುದರಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದೆ.