ಕಾರವಾರ: ಮುಂಗಾರು ಮಳೆಯಿಂದ ಸಂಭವಿಸಬಹುದಾದ ಭೂಕುಸಿತ ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಹಲವು ಅಪಾಯಕಾರಿ ಪ್ರದೇಶಗಳಲ್ಲಿ ಜುಲೈ 6ರಿಂದ ಮಳೆಗಾಲ ಮುಗಿಯುವವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಆದೇಶದ ಪ್ರಕಾರ ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಲಂಡನ್ ಬ್ರಿಡ್ಜ್ನಿಂದ ಬಿಣಗಾ ಸುರಂಗದ ಅಂತ್ಯದವರೆಗೆ ಎರಡೂ ಬದಿಯ 750 ಮೀಟರ್ ವ್ಯಾಪ್ತಿ, ಅರ್ಗಾ ಸಂಕ್ರುಭಾಗ ಘಟ್ಟದ ಎಡಬದಿ 100 ಮೀಟರ್ ಹಾಗೂ ಜಿ.ಕೆ. ರಾಮ್ ಕ್ವಾರಿ ಸಮೀಪದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಐಆರ್ಬಿ ಗುಡ್ಡ ಕೊರೆದಿರುವ ಒಂದು ಕಿಲೋಮೀಟರ್ ವ್ಯಾಪ್ತಿ ಹಾಗೂ ಬೆಳ್ಳೆ ರೈಲ್ವೆ ಸೇತುವೆಯಿಂದ ಕುಮಟಾ ಕಡೆಗಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿಯೂ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ.
ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಮತ್ತು 69ರಲ್ಲಿ ಗುಣಗುಣಕೇರಿ, ಪ್ರಮೀಳಾ ರೆಸ್ಟೋರೆಂಟ್ ಸಮೀಪ, ಮೂಡಕಣಿ (ಖರ್ವಾ ಕ್ರಾಸ್), ಸೂಳೆಮೂರ್ಕಿ ಕ್ರಾಸ್ ಹಾಗೂ ಕರ್ಕಿನಾಕಾ ಭಾಗದ ತಲಾ 30 ಮೀಟರ್ ವ್ಯಾಪ್ತಿಯಲ್ಲಿ ನಿಲುಗಡೆ ನಿಷೇಧಿಸಲಾಗಿದೆ.
ಕುಮಟಾ ತಾಲೂಕಿನ ದಿವಗಿ ಮತ್ತು ದುಂಡಕುಳಿ ಸಮೀಪ ತಲಾ 200 ಮೀಟರ್ ವ್ಯಾಪ್ತಿಯಲ್ಲೂ ಈ ಆದೇಶ ಅನ್ವಯವಾಗಲಿದೆ.
ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-766ಇಯ ವೆಂಕಟೇಶತೀರ್ಥ ತಿರುವು, ಮೊಸಳಗುಂಡಿ ಸೇತುವೆ, ಬಂಡಲಘಾಟ್–ಮುಂಗನ ರಸ್ತೆ ಕ್ರಾಸ್ ಹಾಗೂ ದೇವಿಮನೆ ಕಲ್ಲುಹೊಳೆ ಸಮೀಪದ ಅಪಾಯಕಾರಿ ಪ್ರದೇಶಗಳಲ್ಲೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ಸವಾರರು ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.