ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಯಶಸ್ವಿ 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, “ವಿಶ್ವಾಸ ಕೇ, ವಿಕಾಸ ಕೇ, ಜನ ಕಲ್ಯಾಣ ಕೇ” ಎಂಬ ಘೋಷವಾಕ್ಯದಡಿ ಬಿಜೆಪಿ ರೈತ ಮೋರ್ಚಾ, ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ರೈತರು ಸಾವಯವ ಗೊಬ್ಬರಗಳ ಬಳಕೆಯ ಮೂಲಕ ಉತ್ತಮ ಇಳುವರಿ ಪಡೆಯುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಜೂನ್ 20ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ಕಡಸಾಲಗದ್ದೆಯಲ್ಲಿರುವ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ತೋಟದಲ್ಲಿ ನಡೆಯಲಿದೆ.
ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ಪದ್ಧತಿ, ಸಾವಯವ ಗೊಬ್ಬರಗಳ ಮಹತ್ವ ಮತ್ತು ಉಪಯೋಗ, ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳು, ಜೀವಾಮೃತ, ಬೀಜಾಮೃತ ಹಾಗೂ ಘನಜೀವಾಮೃತ ತಯಾರಿಕೆ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುವ ತಂತ್ರಗಳು, ನೈಸರ್ಗಿಕ ರೀತಿಯ ರೋಗ ಮತ್ತು ಕೀಟ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ಜೊತೆಗೆ ರೈತರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತೂ ಅರಿವು ಮೂಡಿಸಲಾಗುವುದು.
ಕಾರ್ಯಕ್ರಮದಲ್ಲಿ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮನವಿ ಮಾಡಿದ್ದಾರೆ.