ಕಾರವಾರ: ಕಾರವಾರ ಅಂಚೆ ವಿಭಾಗ ಹಾಗೂ ನೌ-ಸೇನಾ ನಾಗರಿಕರ ವಸತಿ ಸಮುಚ್ಚಯ ಇವರ ವತಿಯಿಂದ ಆ.8 ರಂದು ಅಮದಳ್ಳಿ ಸಿ.ಎಚ್.ಸಿ ಕಮ್ಯೂನಿಟಿ ಹಾಲ್ನಲ್ಲಿ ಆಧಾರ್ ನವೀಕರಣ ಹಾಗೂ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ಅಧಿಕಾರಿ ರಾಜಕುಮಾರ್, ಈ ಅಭಿಯಾನದ ಅಂಗವಾಗಿ ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯ ತಿದ್ದುಪಡಿ ಸೇವೆಗಳನ್ನು ಒದಗಿಸಲಾಗುವುದು. ಜೊತೆಗೆ ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ ವಿವಿಧ ಅಂಚೆ ಸೇವೆಗಳ ಕುರಿತು ಮಾಹಿತಿ ಹಾಗೂ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಸೇರಿದಂತೆ ವಿವಿಧ ವಿಮಾ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಫಲಾನುಭವಿಗಳಿಗಾಗಿ ಖಾತೆಗಳನ್ನು ಸ್ಥಳದಲ್ಲಿಯೇ ತೆರೆಯುವ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರವಾರ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ ರಾಮದಾಸ ಪಟಗಾರ, ಉಪ ವಿಭಾಗ ಅಂಚೆ ಮೇಲ್ವಿಚಾರಕರಾದ ಕಿರಣ್ ಕುಮಾರ್, ಅಮರ್ ನಾಗೇಕರ್, ಅಜಿತ್ ನಾಯ್ಕ್, ಅಮಿತ್ ಗೌಡ ಮತ್ತಿತರರು ಇದ್ದರು.