ನಾಮಧಾರಿ ಸಮಾಜದ ವಾರ್ಷಿಕೋತ್ಸವದಲ್ಲಿ ಹೋರಾಟಗಾರ ರವೀಂದ್ರ ನಾಯ್ಕ
ಸಿದ್ದಾಪುರ: ಸಮಾಜ ಸಂಘಟನೆಗಳು ಸಂಕುಚಿತ ಮನೋಭಾವವನ್ನು ಬಿಟ್ಟು ವಿಶಾಲ ದೃಷ್ಟಿಕೋನದೊಂದಿಗೆ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಸಮಾಜದ ಆಂತರಿಕ ಸಮಸ್ಯೆಗಳ ಪರಿಹಾರ ಹಾಗೂ ಪ್ರತಿಭೆಗಳ ಗುರುತಿಸುವಿಕೆಗೆ ವೇದಿಕೆಯಾಗಬೇಕು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.
ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಗ್ರಾಮದಲ್ಲಿ ನಡೆದ ಶ್ರೀ ವೆಂಕಟನಾರಾಯಣ ಆರ್ಯ ಈಡಿಗ, ಬಿಲ್ಲವ, ಪೂಜಾರಿ, ನಾಮಧಾರಿ ಸಮಾಜ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ವಂಚಿತ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಹಕ್ಕುಗಳ ರಕ್ಷಣೆ ಮತ್ತು ಸಮುದಾಯದ ಸಾಮಾಜಿಕ ಬಲವರ್ಧನೆಗೆ ಸಂಘಟನೆಗಳು ಶ್ರಮಿಸಬೇಕು ಎಂದು ಅವರು ಹೇಳಿದರು.
ತಲೆತಲಾಂತರಗಳಿಂದ ಬಂದಿರುವ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂರಕ್ಷಣೆಯಲ್ಲಿಯೂ ಸಮಾಜ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ನೇರ್ಲಮನೆ ಶಾಲೆಯ ಮುಖ್ಯ ಶಿಕ್ಷಕ ಕೆ.ಜಿ. ನಾಯ್ಕ, ಮಕ್ಕಳಿಗೆ ಶಿಕ್ಷಣದ ಪೂರಕ ಚಟುವಟಿಕೆಗಳಿಗೆ ಮಾತ್ರ ಟಿ.ವಿ. ಮತ್ತು ಮೊಬೈಲ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಸಮಾಜದಲ್ಲಿನ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘಟನೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಂ.ಎಚ್. ನಾಯ್ಕ, ಶಿಕ್ಷಣದ ಜೊತೆಗೆ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ. ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ಯುವಕರು ಮತ್ತು ಸಂಘಟನೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ದೈಹಿಕ ಶಿಕ್ಷಕ ಎಂ.ವಿ. ನಾಯ್ಕ ಮಾತನಾಡಿದರು. ಮಂಜುನಾಥ ನಾಯ್ಕ ಸ್ವಾಗತಿಸಿದರು. ಮಮತಾ ವಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಹರಿಹರ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಾಯ್ಕ ವಂದಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸೂರಜ್ ನಾಯ್ಕ, ಪ್ರಮೋದ್ ನಾಯ್ಕ ಬೀರನಜಡ್ಡಿ, ಸಮರ್ಥ ಟ್ರಸ್ಟ್ ಅಧ್ಯಕ್ಷೆ ಪ್ರತಿಭಾ ಮಂಜುನಾಥ ನಾಯ್ಕ, ಮಂಜುನಾಥ ಎಂ. ನಾಯ್ಕ, ಸುಬ್ರಾಯ ನಾಯ್ಕ, ಮೋಹನ್ ಜಿ. ನಾಯ್ಕ, ಮಂಜುನಾಥ ಪೂಜಾರಿ ದ್ಯಾವಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹತ್ತು ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಧನಸಹಾಯದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.