ಯಲ್ಲಾಪುರ: ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜನಪರ ಆಡಳಿತದ ಮೂಲಕ ರಾಜ್ಯದ ಬಡವರು, ರೈತರು, ಹಿಂದುಳಿದ ವರ್ಗಗಳು ಮತ್ತು ಸಾಮಾನ್ಯ ಜನರ ಬದುಕಿಗೆ ಆಶಾಕಿರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವ ದೃಢ ನಿಲುವಿನ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಮನ ಗೆದ್ದಿದ್ದು, ಅಭಿವೃದ್ಧಿಯ ಫಲ ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಧ್ಯೇಯದೊಂದಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಯಲ್ಲಾಪುರ–ಮುಂಡಗೋಡ–ಬನವಾಸಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಬೆಂಬಲ ಅಪಾರವಾಗಿದೆ. ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ರೈತರ ಬದುಕಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಅನುದಾನ ಒದಗಿಸಿದ್ದು, ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ ಎಂದು ಹೇಳಿದ್ದಾರೆ.
ಅವರ ದೂರದೃಷ್ಟಿಯ ನಿರ್ಧಾರಗಳಿಂದ ಅನೇಕ ಗ್ರಾಮಗಳಿಗೆ ನೀರಿನ ಭದ್ರತೆ ದೊರೆತಿದ್ದು, ರೈತರ ಭವಿಷ್ಯಕ್ಕೆ ಹೊಸ ಭರವಸೆ ಮೂಡಿದೆ. ಮುಖ್ಯಮಂತ್ರಿಯಾಗಿ ಅವರು ಸಲ್ಲಿಸಿರುವ ಜನಪರ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ತೋರಿರುವ ಬದ್ಧತೆ ಹಾಗೂ ಬಡವರು, ರೈತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಕೈಗೊಂಡಿರುವ ಕ್ರಮಗಳು ರಾಜ್ಯದ ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆಯಲಿವೆ ಎಂದು ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ದೂರದೃಷ್ಟಿಯ ನಾಯಕತ್ವ, ಅಭಿವೃದ್ಧಿಪರ ಚಿಂತನೆ ಹಾಗೂ ಜನಸೇವೆಯ ಅಮೂಲ್ಯ ಕೊಡುಗೆಯನ್ನು ಕರುನಾಡಿನ ಜನತೆ ಸದಾ ಗೌರವದಿಂದ ಸ್ಮರಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.