ಶಿರಸಿ: ಮೇ 27ರಂದು ಮಂಜುಗುಣಿ ಕ್ರಾಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಮೇ 27ರಂದು ಮಧ್ಯಾಹ್ನ ಮಂಜುಗುಣಿ ಕಡೆಯಿಂದ ಶಿರಸಿ–ಕುಮಟಾ ರಸ್ತೆಗೆ ಬರುತ್ತಿದ್ದ ಟಿಪ್ಪರ್ (ಕೆಎ-47/6934) ಚಾಲಕ ಗೋಪಾಲ ಮಹಾಬಲೇಶ್ವರ ಗೌಡ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ. ವೇಗ ನಿಯಂತ್ರಿಸಲು ವಿಫಲವಾದ ಲಾರಿ, ಮುಂದೆ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ದೊಡ್ನಳ್ಳಿ ನಿವಾಸಿ ಉಲ್ಲಾಸ ಸಣ್ಯ ಆರೇರ (26) ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಉಲ್ಲಾಸ ಅವರ ಎಡ ಕಾಲು, ಹಣೆ, ಕಣ್ಣಿನ ಹುಬ್ಬು, ತಲೆ ಹಾಗೂ ಎಡ ಭುಜಕ್ಕೆ ತೀವ್ರ ಗಾಯಗಳಾಗಿದ್ದವು. ಅವರನ್ನು ಮೊದಲು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಉಲ್ಲಾಸ ಜೂನ್ 26ರಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅವರ ಸಹೋದರಿ ನೇತ್ರಾವತಿ ಸಣ್ಯ ಆರೇರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹೊಸ ಕಲಂ ಸೇರ್ಪಡೆಗೊಳಿಸಿದ್ದು, ಟಿಪ್ಪರ್ ಚಾಲಕ ಗೋಪಾಲ ಮಹಾಬಲೇಶ್ವರ ಗೌಡ ವಿರುದ್ಧ ತನಿಖೆ ಮುಂದುವರಿದಿದೆ.