Thursday, July 23, 2026
Join WhatsApp Group
HomeInformationSpecialರಾಷ್ಟ್ರಪತಿ ಭವನದತ್ತ ಶಿರಸಿಯ ಯುವ ವಿಜ್ಞಾನಿ!

ರಾಷ್ಟ್ರಪತಿ ಭವನದತ್ತ ಶಿರಸಿಯ ಯುವ ವಿಜ್ಞಾನಿ!

ದೇಶದ 26 ನವೋದ್ಯಮಿಗಳಲ್ಲಿ ಅಕ್ಷಯ್ ಮಾಶೇಲ್ಕರ್‌ಗೆ ಸ್ಥಾನ
ಶಿಕ್ಷಣ ಕ್ಷೇತ್ರದ ಸಂಶೋಧನೆಗೆ ‘Grassroots Innovator Recognition – 2026’ ರಾಷ್ಟ್ರೀಯ ಗೌರವ

ಶಿರಸಿ: ಉತ್ತರ ಕನ್ನಡದ ಪುಟ್ಟ ಪಟ್ಟಣ ಶಿರಸಿಯಿಂದ ಆರಂಭವಾದ ಕನಸು ಈಗ ರಾಷ್ಟ್ರಪತಿ ಭವನದವರೆಗೆ ತಲುಪಿದೆ. ಗ್ರಾಮೀಣ ಮಕ್ಕಳಿಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯಬೇಕು ಎಂಬ ಧ್ಯೇಯದೊಂದಿಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿರುವ ಯುವ ವಿಜ್ಞಾನಿ ಅಕ್ಷಯ್ ಜಯವಂತ್ ಮಾಶೇಲ್ಕರ್ ಅವರಿಗೆ ದೇಶದ ಪ್ರತಿಷ್ಠಿತ ‘Grassroots Innovator Recognition – 2026’ ಗೌರವ ಲಭಿಸಿದೆ.

ನಿತಿ ಆಯೋಗದ ಅಟಲ್ ಇನೋವೇಶನ್ ಮಿಷನ್ (AIM) ವತಿಯಿಂದ ನೀಡಲಾಗುವ ಈ ರಾಷ್ಟ್ರೀಯ ಗೌರವಕ್ಕೆ ದೇಶದಾದ್ಯಂತ ಆಯ್ಕೆಯಾದ ಕೇವಲ 26 ಗ್ರಾಸ್‌ರೂಟ್ಸ್ ಇನೋವೇಟರ್‌ಗಳಲ್ಲಿ ಅಕ್ಷಯ್ ಕೂಡ ಒಬ್ಬರಾಗಿರುವುದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದೆ.

ಜುಲೈ 31ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರಿಂದ ಅವರಿಗೆ ಈ ಪ್ರಶಸ್ತಿ ಪ್ರದಾನವಾಗಲಿದೆ.

ಶಿಕ್ಷಣವನ್ನು ಬದಲಿಸುವ ಸಂಶೋಧನೆಗೆ ರಾಷ್ಟ್ರದ ಮನ್ನಣೆ

ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕಗಳಲ್ಲೇ ಸೀಮಿತಗೊಳಿಸದೆ, ಅನುಭವಾತ್ಮಕ ಹಾಗೂ ಆಸಕ್ತಿದಾಯಕವಾಗಿಸುವ ಉದ್ದೇಶದಿಂದ ಅಕ್ಷಯ್ ಹಲವು ನವೀನ ಸಂಶೋಧನೆಗಳನ್ನು ನಡೆಸಿದ್ದಾರೆ. ಶಿಕ್ಷಣ ಸಂಶೋಧನಾ ಕ್ಷೇತ್ರದಲ್ಲಿ ಅವರು ರೂಪಿಸಿರುವ ಹಲವು ತಂತ್ರಜ್ಞಾನ ಆಧಾರಿತ ಕಲಿಕಾ ಮಾದರಿಗಳು ಈ ರಾಷ್ಟ್ರೀಯ ಗೌರವಕ್ಕೆ ಅವರನ್ನು ಪಾತ್ರರನ್ನಾಗಿಸಿವೆ.

ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಸಂಶೋಧನಾ ಕ್ಷೇತ್ರದಲ್ಲಿ ಪಿಎಚ್‌.ಡಿ. ವ್ಯಾಸಂಗ ಮಾಡುತ್ತಿರುವ ಅಕ್ಷಯ್, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ತಲುಪಬೇಕು ಎಂಬ ಉದ್ದೇಶದಿಂದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

AI, AR, VR ಮೂಲಕ ಹೊಸ ಶಿಕ್ಷಣ ಕ್ರಾಂತಿ

ಅಕ್ಷಯ್ ಅಭಿವೃದ್ಧಿಪಡಿಸಿರುವ ಶೈಕ್ಷಣಿಕ ತಂತ್ರಜ್ಞಾನಗಳಲ್ಲಿ AR (Augmented Reality), VR (Virtual Reality) ಆಧಾರಿತ ಕಲಿಕಾ ಪರಿಹಾರಗಳು, STEM ಶಿಕ್ಷಣ ಸಾಧನಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಣ ಉಪಕರಣಗಳು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಹಲವು ಶಿಕ್ಷಣ ಆಟಿಕೆಗಳು ಸೇರಿವೆ.

ಅವರ ಸಂಶೋಧನೆಗಳು ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಕೇವಲ ಓದುವ ವಿಷಯವಲ್ಲ, ಅನುಭವಿಸಿ ಕಲಿಯುವ ವಿಷಯವನ್ನಾಗಿ ರೂಪಿಸುವತ್ತ ಗಮನಹರಿಸಿವೆ.

‘Geomagic’ಗೆ ನಾಲ್ಕು ಪೇಟೆಂಟ್

ಅಕ್ಷಯ್ ರೂಪಿಸಿರುವ ‘Geomagic’ ಎಂಬ ಗಣಿತ ಶಿಕ್ಷಣ ಸಂಶೋಧನೆಗೆ ಇತ್ತೀಚೆಗೆ ನಾಲ್ಕು ಪೇಟೆಂಟ್‌ಗಳು ದೊರೆತಿವೆ. ಆಟದ ಮೂಲಕ ಗಣಿತವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ರೂಪಿಸಲಾದ ಈ ಸಂಶೋಧನೆ ಈಗಾಗಲೇ ಶಿಕ್ಷಣ ಕ್ಷೇತ್ರದ ತಜ್ಞರಿಂದ ಮೆಚ್ಚುಗೆ ಪಡೆದಿದೆ.

ಶಿರಸಿಯಿಂದ ರಾಷ್ಟ್ರಪತಿ ಭವನದವರೆಗೆ…

ಒಂದು ಸಣ್ಣ ಪಟ್ಟಣದ ಯುವ ವಿಜ್ಞಾನಿಯ ಸಂಶೋಧನೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಹೊಸ ಪ್ರೇರಣೆ. ಶಿಕ್ಷಣ ಕ್ಷೇತ್ರದಲ್ಲಿ ನವೋದ್ಯಮದ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬುದನ್ನು ಅಕ್ಷಯ್ ಮಾಶೇಲ್ಕರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಜುಲೈ 31ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಗೌರವ ಸಮಾರಂಭವು ಕೇವಲ ಅಕ್ಷಯ್ ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ವೈಜ್ಞಾನಿಕ ಪ್ರತಿಭೆಗೆ ದೊರೆತ ರಾಷ್ಟ್ರೀಯ ಮನ್ನಣೆಯೂ ಆಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share